ಬೆಂಗಳೂರು: ‘ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಪರಿಸರ ಉಳಿಸಿ’ ಎಂಬ ಘೋಷಣೆಯೊಂದಿಗೆ ವಿವಿಧ ಪರಿಸರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಜಾಗೃತಿ ಅಭಿಯಾನ ನಡೆಸಿದರು.
‘ಮುಂದಿನ ಭವಿಷ್ಯ ಇಂದಿನಿಂದ, ಹವಾಮಾನ ಬದಲಾಗುತ್ತಿದೆ..ನೀವೆಂದು ಬದಲಾಗುತ್ತೀರಿ?, ವ್ಯವಸ್ಥೆ ಬದಲಾಗಲಿ.. ಹವಾಮಾನವಲ್ಲ, ಜನರು ಬದಲಾಗಲಿ.. ವಾಯುಗುಣವಲ್ಲ, ಈ ಭೂಮಿ, ಗಾಳಿ, ನೀರು ನಮ್ಮದು..ಇದರ ಸಂರಕ್ಷಣೆಯ ಹೊಣೆಯೂ ನಮ್ಮದೇ’ ಎಂಬ ಘೋಷವಾಕ್ಯಗಳನ್ನು ಕೂಗಿ,ಸಂಗೀತ, ನೃತ್ಯ, ಬೀದಿ ನಾಟಕಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
‘ನಗರದಲ್ಲಿ ದಿನೇದಿನೇ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ನಗರದ ಪರಿಸರವನ್ನು ಹಾಳು ಮಾಡುತ್ತಿವೆ. ವಿಶ್ವ ಪರಿಸರ ದಿನ ಸಮೀಪಿಸುತ್ತಿದೆ. ಒಂದು ದಿನ ಆಚರಣೆಯಲ್ಲಿ ತೊಡಗಿ, ಭಾಷಣ ಮಾಡುವುದರಿಂದ ಪರಿಸರ ಉಳಿಯುವುದಿಲ್ಲ. ಅದನ್ನು ಕರ್ತವ್ಯದಂತೆ ಪಾಲಿಸಬೇಕು. ಇನ್ನು ಮುಂದಾದರೂ ಸರ್ಕಾರಗಳು ಪರಿಸರ ಬಗ್ಗೆ ಕಾಳಜಿ ತೋರಬೇಕು’ ಎಂದುಅಭಿಯಾನದಲ್ಲಿ ಭಾಗವಹಿಸಿದ್ದ ದಿಶಾ ಹೇಳಿದರು.
‘ಲೋಕಸಭೆ ಚುನಾವಣೆ ವೇಳೆ ಪಕ್ಷಗಳು ಪ್ರಣಾಳಿಕೆಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಪ್ರಸ್ತಾಪಿಸಲಿಲ್ಲ. ಪರಿಸರದ ಉಳಿವಿಗಾಗಿ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಪರಿಸರ ಉಳಿಸಿ ಎಂದು ನಾವೇ ಒತ್ತಡ ಹೇರುವುದು ದುರಂತ’ ಎಂದು ಉದಯ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.