ಬೆಂಗಳೂರು: ರಾಜಾನುಕುಂಟೆಯ ಶಾನುಭೋಗನಹಳ್ಳಿ ಬಳಿ ವಿದ್ಯಾರ್ಥಿನಿ ರಾಶಿ (19) ಎಂಬುವರನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಮಧುಚಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಶಾನುಭೋಗನಹಳ್ಳಿ ನಿವಾಸಿ ರಾಶಿ, ಯಲಹಂಕ ಬಳಿಯ ಕಾಲೇಜೊಂದರಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಮುಗಿಸಿ ಮಂಗಳವಾರ ಸಂಜೆ ಮನೆಗೆ ಹೊರಟಿದ್ದಾಗ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸಲುಗೆ ಮುಂದುವರಿಸಲು ಪೀಡಿಸಿದ್ದ: ‘ರಾಶಿ ಅವರನ್ನು ಆರೋಪಿ ಮಧುಚಂದ್ರ ಪರಿಚಯ ಮಾಡಿಕೊಂಡಿದ್ದ. ಸಲುಗೆ ಸಹ ಬೆಳೆಸಿದ್ದನೆಂದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಇತ್ತೀಚೆಗೆ ಬೇರೆ ಯುವತಿಯನ್ನು ಮಧುಚಂದ್ರ ಮದುವೆಯಾಗಿದ್ದ. ಈ ವಿಷಯ ಮುಚ್ಚಿಟ್ಟು ರಾಶಿ ಜೊತೆ ಮಾತನಾಡುತ್ತಿದ್ದ. ಮದುವೆ ವಿಷಯ ಗೊತ್ತಾಗುತ್ತಿದ್ದಂತೆ ರಾಶಿ, ಆರೋಪಿಯಿಂದ ದೂರವಿರಲು ಯತ್ನಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಆರೋಪಿ, ತನ್ನೊಂದಿಗೆ ಸಲುಗೆ ಮುಂದುವರಿಸುವಂತೆ ಪೀಡಿಸಲಾರಂಭಿಸಿದ್ದ. ಸಲುಗೆ ಮುಂದುವರಿಸಲು ಯುವತಿ ನಿರಾಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಮಂಗಳವಾರ ಸಂಜೆ ಮನೆಯತ್ತ ಹೊರಟಿದ್ದ ರಾಶಿ ಅವರನ್ನು ಅಡ್ಡಗಟ್ಟಿದ್ದ ಆರೋಪಿ, ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿದ್ದ. ಕತ್ತು ಹಿಡಿದುಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ದ ರಾಶಿ, ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಿ.ಟೆಕ್ ವಿದ್ಯಾರ್ಥಿನಿ ಕೊಲೆ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿನಿ ಲಯಸ್ಮಿತಾ (19) ಎಂಬುವರನ್ನು ಜ. 2ರಂದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಪ್ರೀತಿ ವಿಚಾರವಾಗಿ ಕೃತ್ಯ ಎಸಗಿದ್ದ ಪವನ್ ಕಲ್ಯಾಣ್ (23) ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.