ಬೆಂಗಳೂರು: ಕರ್ನಾಟಕ ಅಲೆಮಾರಿ–ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ₹200 ಕೋಟಿ ಅನುದಾನ ನೀಡಬೇಕು ಎಂದು ಕೋರಿ ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
‘ಈ ಬಜೆಟ್ನಲ್ಲಿ ಅಲೆಮಾರಿ ನಿಗಮಕ್ಕೆ ₹6 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಪ್ರವರ್ಗ–1ರಡಿ ಬರುವ ಗೋಂಧಳಿ, ಬುಡುಬುಡುಕೆ, ಜೋಷಿ, ವಾಸುದೇವ ಸೇರಿದಂತೆ 46 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿವೆ. ಇವರೆಲ್ಲ ಬಡತನದ ಜೀವನ ನಡೆಸುತ್ತಿದ್ದಾರೆ. ಇವರ ಸ್ವಾವಲಂಬಿ ಜೀವನಕ್ಕಾಗಿ ₹200 ಕೋಟಿ ಅನುದಾನವನ್ನು ನಿಗಮಕ್ಕೆ ನೀಡಬೇಕು’ ಎಂದುಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ ಮನವಿ ಮಾಡಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಅಲೆಮಾರಿ ಸಮುದಾಯಗಳಿಗೆ ವಸತಿ ವೆಚ್ಚವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದೇ ರೀತಿ ಪ್ರವರ್ಗ–1ರಲ್ಲಿ ಬರುವ 46 ಅಲೆಮಾರಿ ಸಮುದಾಯಗಳಿಗೂ ವಸತಿ ವೆಚ್ಚವನ್ನು ಸರ್ಕಾರ ಹೆಚ್ಚಿಸಬೇಕು. ಇದರಿಂದ ಅಲೆಮಾರಿ ಜೀವನ ನಿಲ್ಲಿಸಿ, ಒಂದೆಡೆ ಜೀವನ ನಡೆಸಲು ಹಾಗೂ ಮಕ್ಕಳ ಶಿಕ್ಷಣಕ್ಕೆ ಬಹಳ ಅನುಕೂಲವಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.