ADVERTISEMENT

ಬೆಂಗಳೂರು ಕಾಲ್ತುಳಿತ ಪ್ರಕರಣ: ಅಮಿಕಸ್‌ ಕ್ಯೂರಿಯ ನೇಮಕ

ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ l ಸುಶೀಲಾ ನೇಮಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 0:07 IST
Last Updated 24 ಜೂನ್ 2025, 0:07 IST
<div class="paragraphs"><p>ಎಸ್‌.ಸುಶೀಲಾ</p></div>

ಎಸ್‌.ಸುಶೀಲಾ

   

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಪದಾಂಕಿತ ಹಿರಿಯ ವಕೀಲೆ ಎಸ್‌.ಸುಶೀಲಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ.

ಕಾಲ್ತುಳಿತ ಘಟನೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ADVERTISEMENT

‘ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ವಸ್ತುಸ್ಥಿತಿ ವರದಿಗಳು, ರಿಟ್‌ ಅರ್ಜಿ, ಮಧ್ಯಪ್ರವೇಶ ಸೇರ್ಪಡೆ ಕೋರಿಕೆಯ ಅರ್ಜಿಗಳನ್ನು ಅಮಿಕಸ್‌ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲರು) ಸುಶೀಲಾ ಅವರಿಗೆ ರಿಜಿಸ್ಟ್ರಿಯು ಎರಡು ದಿನಗಳಲ್ಲಿ ಪೂರೈಸಬೇಕು’ ಎಂದು ನ್ಯಾಯಪೀಠ ಆದೇಶಿಸಿತು.

‘ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವಸ್ತುಸ್ಥಿತಿ ವರದಿಗಳನ್ನು ಬಹಿರಂಗಗೊಳಿಸಬೇಕು ಎಂದು ಮಧ್ಯಪ್ರವೇಶ ಸೇರ್ಪಡೆ ಕೋರಿಕೆಯ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಈ ವಿಚಾರದಲ್ಲಿ ಅಮಿಕಸ್‌ ಕ್ಯೂರಿ ನೆರವು ನೀಡಬೇಕು. ಕಾಲ್ತುಳಿತದಲ್ಲಿ ಮೃತ ಪಟ್ಟವರಿಗೆ ಪರಿಹಾರ ನೀಡುವುದೂ ಸೇರಿದಂತೆ ಜೂನ್‌ 4ರಂದು ನ್ಯಾಯಪೀಠ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಹಕರಿಸಬೇಕು’ →ಎಂದು ಅಮಿಕಸ್‌ ಕ್ಯೂರಿ ಅವರಿಗೆ ನಿರ್ದೇಶಿಸಿತು.

ಈ ಹಿಂದಿನ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಡಿಎನ್‌ಎಗಳಿಗೆ ನೋಟಿಸ್‌ ಜಾರಿಗೆ ನ್ಯಾಯಪೀಠ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಪರ ಪದಾಂಕಿತ ಹಿರಿಯ ವಕೀಲ ಎಂ.ಎಸ್.ಶ್ಯಾಮ್‌ಸುಂದರ್‌, ಆರ್‌ಸಿಬಿ ಪರ ಪದಾಂಕಿತ ಹಿರಿಯ ವಕೀಲ ಸಿ.ಕೆ.ನಂದಕುಮಾರ್, ಡಿಎನ್‌ಎ ಪರ ಪದಾಂಕಿತ ಹಿರಿಯ ವಕೀಲ ಬಿ.ಕೆ.ಸಂಪತ್‌ ಕುಮಾರ್‌ ಹಾಜರಾಗಿದ್ದರು.

ಕಾಲ್ತುಳಿತದಲ್ಲಿ ಮೃತಪಟ್ಟ 19 ವರ್ಷದ ವಿದ್ಯಾರ್ಥಿ ಜಿ.ಪ್ರಜ್ವಲ್‌ ಅವರ ತಂದೆಯ ಪರವಾಗಿ ಪದಾಂಕಿತ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು, ‘ಸಂತ್ರಸ್ತರಿಗೆ ಸರ್ಕಾರ ಘೋಷಿಸಿರುವ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ಆದೇಶಿಸಬೇಕು’ ಎಂದು ಮನವಿ ಮಾಡಿದರು.

ಮತ್ತೊಬ್ಬ ವಕೀಲ ರಮೇಶ್ ನಾಯಕ್, ‘ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತದ ಕುರಿತಂತೆ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.ಮಧ್ಯಂತರ ಅರ್ಜಿದಾರರಲ್ಲಿ, ಇಬ್ಬರು ಪತ್ರಕರ್ತರ ಪರವಾಗಿ ಪದಾಂಕಿತ ಹಿರಿಯ ವಕೀಲ ಎಂ.ಬಿ.ನರಗುಂದ, ಮಾಜಿ ಶಾಸಕ ಮೋಹನ ಕುಮಾರ್ ಕೊಂಡಜ್ಜಿ ಪರವಾಗಿ ಪದಾಂಕಿತ ಹಿರಿಯ ವಕೀಲ ಕೆ.ದಿವಾಕರ್‌ ಹಾಗೂ ಮಾರ್ಗಸೂಚಿ ರೂಪಿಸುವ ಮತ್ತು ಈ ಹಿಂದಿನ ಹೈಕೋರ್ಟ್‌ ಆದೇಶಗಳು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೋರಲಾದ ಅರ್ಜಿಗಳಲ್ಲಿ ಎನ್‌.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಜರಿದ್ದರು.

‘ಮಧ್ಯಂತರ ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಆದೇಶ ಹೊರಡಿಸುವು ದಿಲ್ಲ’ ಎಂದು ಮೌಖಿಕವಾಗಿ ನುಡಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.