ಬೆಂಗಳೂರು: ‘ನಾಟಕ ಮತ್ತು ರಂಗಭೂಮಿ ಎರಡೂ ವಿಭಿನ್ನವಾದವು. ರಂಗಭೂಮಿಗೆ ವಿಶಾಲವಾದ ಅರ್ಥವಿದ್ದು, ನೂರಾರು ಕಲೆಗಳ ಸಂಗಮ’ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ (ಎನ್ಎಸ್ಎಸ್) ಆಯೋಜಿಸಿದ ವಿಚಾರ ಕಲರವದ 31ನೇ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು. ‘ರಂಗಭೂಮಿಯು ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಜನರಲ್ಲಿ ಸಾಮರಸ್ಯ, ಸಮಾನತೆ ಹಾಗೂ ಏಕತೆ ಭಾವನೆ ಮೂಡಿಸಲು ಶ್ರಮಿಸಿದೆ’ ಎಂದರು.
‘ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಹುಟ್ಟುವ ದ್ವೇಷವು ಸಮುದಾಯದೊಂದಿಗೆ ಬೆಳೆದು, ಆ ದೇಶವನ್ನೇ ಹಾಳುಮಾಡುತ್ತದೆ. ಅಷ್ಟೇ ಅಲ್ಲ, ವಿನಾಶಕ್ಕೆ ಕಾರಣವಾಗುತ್ತದೆ. ಇದನ್ನು ‘ಮಹಾಭಾರತ’ದಲ್ಲಿ ಕಾಣಬಹುದಾಗಿದೆ. ಎರಡು ಸಾವಿರ ವರ್ಷಗಳ ಹಿಂದೆ ರಚಿತವಾಗಿರುವ‘ರಾಮಾಯಣ’ ಮತ್ತು ‘ಮಹಾಭಾರತ’ ಕಾವ್ಯಗಳು ಇಂದಿಗೂ ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುತ್ತದೆ’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ‘ರಂಗಭೂಮಿಯು ಮಹಾಕಾವ್ಯಗಳನ್ನು ಒಳಗೊಂಡಿದೆ. ಇದು ದೇಶದ ಏಕತೆಗೆ ಸಹಕಾರಿ’ ಎಂದರು.
ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹಾಗೂ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.