ADVERTISEMENT

ನಗರದಲ್ಲೆಡೆ ಬಸವ ತತ್ವ ಸ್ಮರಣೆ

ಬಸವೇಶ್ವರರ ಭಾವಚಿತ್ರದ ಮೆರವಣಿಗೆ * ವಚನ ಗಾಯನ * ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:52 IST
Last Updated 7 ಮೇ 2019, 19:52 IST
ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಅವರ ಪುತ್ಥಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಗೃಹ ಸಚಿವ ಎಂ.ಬಿ.ಪಾಟೀಲ, ಮೇಯರ್‌ ಗಂಗಾಬಿಕೆ ಅವರು ಪುಷ್ಪ ನಮನ ಸಲ್ಲಿಸಿದರು.
ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಅವರ ಪುತ್ಥಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಗೃಹ ಸಚಿವ ಎಂ.ಬಿ.ಪಾಟೀಲ, ಮೇಯರ್‌ ಗಂಗಾಬಿಕೆ ಅವರು ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ನಗರದಲ್ಲಿ ಬಸವ ಜಯಂತಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳು ಶರಣ ವಿಚಾರಧಾರೆಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಿದವು.

ಜಯಂತಿ ಪ್ರಯುಕ್ತ ಬಸವೇಶ್ವರ ಅವರ ಪುತ್ಥಳಿ, ಪ್ರತಿಮೆಗಳು ತರಹೇವಾರಿ ಹೂಗಳ ಅಲಂಕಾರದಿಂದ ಕಂಗೊಳಿಸಿದವು. ವಚನಗಳ ಗಾಯನಗಳು ಮೊಳಗಿದವು. ಕೆಲವೆಡೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆಗಳು ಜರುಗಿದವು.

ವಚನ ಜ್ಯೋತಿ ಬಳಗವು ವಿಜಯನಗರದಲ್ಲಿ ‘ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿರಿ’ ಕಾರ್ಯಕ್ರಮ ಆಯೋಜಿಸಿತ್ತು. ಬಸವ ಉತ್ಸವಮೂರ್ತಿಗೆ ಮತ್ತು ವಚನ ಸಂಪುಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಆರಂಭವಾಯಿತು. ದಾರಿಯುದ್ದಕ್ಕೂ ಬಸವಣ್ಣ ಅವರ ಕುರಿತ ಜಯಘೋಷಗಳು ಮೊಳಗಿದವು. ವಚನ ಗಾಯನ ನಡೆಯಿತು.

ADVERTISEMENT

ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಘಟಕ ಸದಾಶಿವನಗರದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಭಾಷ್ಯಂ ವೃತ್ತದಿಂದ ಮಹಾಸಭಾದ ಕೇಂದ್ರ ಕಚೇರಿಯ ವರೆಗೂ ಬಸವೇಶ್ವರ, ರೇಣುಕಾಚಾರ್ಯ, ಹಾನಗಲ್‌ ಕುಮಾರೇಶ್ವರ ಹಾಗೂ ಶಿವಕುಮಾರ ಸ್ವಾಮೀಜಿ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಸುಶ್ರಾವ್ಯ ವಚನಾಮೃತ ಧಾರೆ ಕಿವಿಗೆ ಇಂಪು ನೀಡಿತು.

ಕರ್ನಾಟಕ ವೀರಶೈವ ಲಿಂಗಾಯತ ವೇದಿಕೆಯು 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಬಸವೇಶ್ವರರಿಗೆ ಗೌರವ ಸಲ್ಲಿಸಿತು. ವೀರಶೈವ ಸಂಗಮ ಸಂಸ್ಥೆಯಿಂದ ಜೆ.ಪಿ.ನಗರದಲ್ಲಿ ಬಸವಣ್ಣ ಅವರ ಬೆಳ್ಳಿ ಪ್ರತಿಮೆಯ ಮೆರವಣಿಗೆ ನಡೆಯಿತು. ವೀರಗಾಸೆ, ಜನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ರಾಮಯ್ಯ ವೃತ್ತದ ಸಮೀಪದ ಗುರು ಬಸವಣ್ಣ ಉದ್ಯಾನದಲ್ಲಿನ ಪುತ್ಥಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಲ್ಲೇಶ್ವರದ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ್‌ ಮಾಲಾರ್ಪಣೆ ಮಾಡಿದರು.

ಮಂಜುನಾಥ ಸ್ವಾಮಿ ಟೆಂಪಲ್‌ ಟ್ರಸ್ಟ್‌ ರಾಜಾಜಿನಗರದಲ್ಲಿ ಬಸವೇಶ್ವರ ಅವರ ಭಾವಚಿತ್ರ ಮೆರವಣಿಗೆ, ವಾದ್ಯಗೋಷ್ಠಿ, ಮಕ್ಕಳ ವೇಷ ಭೂಷಣ ಸ್ಪರ್ಧೆ, ವಚನ ಗಾಯನ ಆಯೋಜಿಸಿತ್ತು. ವೀರಶೈವ ಲಿಂಗಾಯತ ಬಳಗವು ಮಲ್ಲತ್ತಹಳ್ಳಿಯಲ್ಲಿ ಜಯಂತಿ ಆಚರಿಸಿತು. ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನವು ಕನ್ನಲ್ಲಿಯಲ್ಲಿ ‘ಶಿವರಾತ್ರಿ’ ನಾಟಕ ಪ್ರದರ್ಶನ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.