ಬೆಂಗಳೂರು: ‘105 ಶಾಸಕರನ್ನು ಇರಿಸಿಕೊಂಡು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಸರಿ ಇತ್ತು. ಈ ಕಡೆಯಿಂದ 17 ಜನರನ್ನು ಕರ್ಕೊಂಡು ಹೋಗಿ ಸರ್ಕಾರ ಮಾಡದಿದ್ದರೆ ಈಗಿರುವ ತಲೆಬಿಸಿಗಳೆಲ್ಲಾ ಇರುತ್ತಿದ್ದವಾ’ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಗುರುವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಪೂರಕ ಅಂದಾಜುಗಳ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸರ್ಕಾರ ರಚನೆಯಾದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ‘ಕಸರತ್ತು ಮಾಡಿ ಸರ್ಕಾರ ರಚಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿರಿ. ಈ ಕಡೆಯಿಂದ ಹೋದವರಿಗೆಲ್ಲಾ ಸಚಿವ ಸ್ಥಾನ ಬಿಟ್ಟು ಕೊಟ್ಟಿರಿ. ಮೂಲ ಬಿಜೆಪಿಯವರನ್ನು ಸಮಾಧಾನ ಮಾಡೋಕೆ ದಿನಕ್ಕೊಂದು ನಿಗಮ, ಮಂಡಳಿ ರಚಿಸುತ್ತಿದ್ದೀರಿ. ಇದೆಲ್ಲಾ ಬೇಕಿತ್ತಾ‘ ಎಂದು ಕೇಳಿದರು.
ಈಗಲೇ ವಾಂತಿ ಬರುವಷ್ಟು ನಿಗಮ, ಮಂಡಳಿಗಳಿವೆ. ಇನ್ನೆಷ್ಟು ನಿಗಮ, ಮಂಡಳಿ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರೂ ಹಲವು ಬಾರಿ, ‘ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ದೀರಿ‘ ಎಂದು ಬಿಜೆಪಿಯವರನ್ನು ಹಂಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.