ಬಿಬಿಎಂಪಿ
ರಾಜರಾಜೇಶ್ವರಿನಗರ: ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಬಿಬಿಎಂಪಿ ನಗರ ಯೋಜನೆಗೆ ಸುಳ್ಳು ಮಾಹಿತಿ ನೀಡಿ, ಸಾರ್ವಜನಿಕರು ಓಡಾಡುವ ರಸ್ತೆ ಬಂದ್ ಮಾಡಿದ್ದನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಜ್ಞಾನ ಜ್ಯೋತಿನಗರದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಮಾಲೀಕರು ಅನುಮತಿ ಪಡೆದಿದ್ದರು. ಅದರಲ್ಲಿ ಸಾರ್ವಜನಿಕರು ಓಡಾಡಲು ರಸ್ತೆಯನ್ನು ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಅನುಮತಿ ಪಡೆದ ನಂತರ ಮೂರನೇ ಅಡ್ಡರಸ್ತೆಗೆ ಶೀಟ್ಗಳನ್ನು ಅಡ್ಡಲಾಗಿ ನಿಲ್ಲಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಸಂಬಂಧ ಪಾಲಿಕೆಗೆ ದೂರು ಬಂದಿತ್ತು.
ದೂರು ಆಧರಿಸಿ ಕ್ರಮ ಕೈಗೊಂಡ ಬಿಬಿಎಂಪಿ ವಲಯ ಆಯುಕ್ತ ಸತೀಶ್.ಬಿ.ಸಿ ಅವರು ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಲು ಆದೇಶಿಸಿದರು. ಆ ಆದೇಶದ ಮೇರೆಗೆ ಕಾರ್ಯಪಾಲಕ ಎಂಜಿನಿಯರ್ ಪಾಪರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರನಾರಾಯಣ್, ನಗರಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಹನುಮಂತರಾಯ, ಕಂದಾಯ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಸುರೇಶ್ ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ಸಹಕಾರದೊಂದಿಗೆ ತಡೆಗೋಡೆಯನ್ನು ತೆರವುಗೊಳಿಸಿದರು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
‘ರಸ್ತೆಗೆ ಅಡ್ಡವಾಗಿ ನಿರ್ಮಿಸಿದ್ದ ತಡೆಗೋಡೆ ತೆರವುಗೊಳಿಸಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.