ಬೆಂಗಳೂರು: ವೈಟ್ಟಾಪಿಂಗ್ ಕಾಮಗಾರಿಗಳ ಕುರಿತು ಕ್ಯಾ.ಆರ್.ಆರ್.ದೊಡ್ಡಿಹಾಳ್ ನೇತೃತ್ವದ ಸಮಿತಿ ನೀಡಿದ ವರದಿಯ ಕುರಿತ ಹೇಳಿಕೆಯನ್ನು ಮೇಯರ್ ಎಂ.ಗೌತಮ್ ಕುಮಾರ್ ಮಾರ್ಪಾಡು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ‘ದೊಡ್ಡಿಹಾಳ್ ಸಮಿತಿ ವರದಿ ಪ್ರಕಾರ ವೈಟ್ಟಾಪಿಂಗ್ ಕಾಮಗಾರಿಗಳಲ್ಲಿ ಪ್ರಮುಖ ಲೋಪ ಕಂಡುಬಂದಿಲ್ಲ. ಈ ಕಾಮಗಾರಿಗಳಿಗೆ ಸಮಿತಿ ಕ್ಲೀನ್ ಚಿಟ್ ನೀಡಿದ್ದನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿಯವರೂ ನಮ್ಮ ಪಕ್ಷದವರೇ. ಅವರೇ ರಚನೆ ಮಾಡಿರುವ ಸಮಿತಿ ಅದು. ಆ ಸಮಿತಿಯು ಎಲ್ಲ ಸರಿ ಇದೆ ಎಂದು ವರದಿ ನೀಡಿದ ಮೇಲೆ ಎಲ್ಲವೂ ಸರಿಯಾಗಿಯೇ ಇರುತ್ತದೆ’ ಎಂದಿದ್ದರು.
ಈ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಷ್ಟೀಕರಣ ನೀಡಿರುವ ಅವರು, ‘ಈ ಕ್ಷಣದವರೆಗೂ ವರದಿಯ ಪ್ರತಿ ಕೈಸೇರಿಲ್ಲ. ವರದಿ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಒಪ್ಪುತ್ತೇವೆ’ ಎಂದು ತಿಳಿಸಿದ್ದಾರೆ.
ಉಲ್ಟಾ ಹೊಡೆದ ಮೇಯರ್: ಬಿಜೆಪಿಯ ನಗರ ಘಟಕದ ವಕ್ತಾರರು ದೊಡ್ಡಿಹಾಳ್ ಸಮಿತಿ ವರದಿ ಬಗ್ಗೆ ನೀಡಿದ್ದ ಹೇಳಿಕೆ ಕುರಿತ ಅನೇಕ ಪ್ರಶ್ನೆಗಳಿಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದ ಮೇಯರ್, ಈಗ ಬೇರೇಯೇ ರೀತಿಯ ಹೇಳಿಕೆನೀಡಿದ್ದಾರೆ. ‘ಪಕ್ಷದ ವಕ್ತಾರರ ಕುರಿತು ಯಾವುದೇ ಹೇಳಿಕೆ ನೀಡಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.