ಬೆಂಗಳೂರು: ‘ತಮಗಿರುವ ಅರೆ ನ್ಯಾಯಿಕ ಅಧಿಕಾರವನ್ನು ಬೇರೆಯವರಿಗೆ ವಹಿಸಿ, ಅವರ ಮೂಲಕ ವಿಚಾರಣೆ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಕೋರಿದ್ದ ಅನುಮತಿಯನ್ನುಬಿಬಿಎಂಪಿ ಕಾನೂನು ಕೋಶದ ಅಧಿಕಾರಿಗಳು ನಡೆಸಿದ ವಿಚಾರಣೆ ಆಧರಿಸಿ ನಿರಾಕರಿಸಿದ ಆಯುಕ್ತರ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ.
ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಕೇಳಿದ್ದ ಅನುಮತಿಯನ್ನು ಬಿಬಿಎಂಪಿ 2019ರ ಮಾರ್ಚ್ 16ರಂದು ನಿರಾಕರಿಸಿತ್ತು. ಅದಕ್ಕೂ ಮುನ್ನ ವಿಚಾರಣೆ ನಡೆಸಲು ಬಿಬಿಎಂಪಿ ಕಾನೂನು ಕೋಶಕ್ಕೆ ಆಯುಕ್ತರು ಅಧಿಕಾರ ನೀಡಿದ್ದರು. ‘ಕರ್ನಾಟಕ ಮುನ್ಸಿಪಲ್ ಕೌನ್ಸಿಲ್ (ಕೆಎಂಸಿ) ಕಾಯ್ದೆಯ ಸೆಕ್ಷನ್ 66ರ ಅಡಿಯಲ್ಲಿ ಇರುವ ಅಧಿಕಾರ ಬಳಸಿಕೊಂಡು ಆಯುಕ್ತರು ಅಧಿಕಾರ ಹಸ್ತಾಂತರ ಮಾಡಿದ್ದಾರೆ’ ಎಂದು ಬಿಬಿಎಂಪಿ ಪರ ವಕೀಲರು ವಾದಿಸಿದರು.
‘ಅರೆ ನ್ಯಾಯಿಕ ಅಧಿಕಾರಿಯೇ ವಿಚಾರಣೆ ನಡೆಸಬೇಕೆ ಹೊರತು ಬೇರೆಯವರಿಗೆ ತನ್ನ ಅಧಿಕಾರ ವಹಿಸಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
‘ಕೆಎಂಸಿ ಕಾಯ್ದೆ ಪ್ರಕಾರ ಬೇರೆ ಜವಾಬ್ದಾರಿಗಳನ್ನು ಹಸ್ತಾಂತರಿಸಲು ಅವಕಾಶ ಇದೆ. ಆದರೆ, ಅರೆ ನ್ಯಾಯಿಕ ಅಧಿಕಾರವನ್ನು ಹಸ್ತಾಂತರಿಸುವಂತಿಲ್ಲ. ಮತ್ತೊಮ್ಮೆ ವಿಚಾರಣೆ ನಡೆಸಿ’ ಎಂದು ಪಾಲಿಕೆ ಮುಖ್ಯ ಆಯುಕ್ತರಿಗೆ ಪೀಠ ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.