ADVERTISEMENT

ಗಿಡಗಳು ಬೆಳೆಯಲಿಲ್ಲ; ಹಣವೂ ಉಳಿಯಲಿಲ್ಲ

ಪಾಲಿಕೆ ನಿರ್ಲಕ್ಷ್ಯದಿಂದ ಸಾಯುತ್ತಿವೆ ಸಸಿಗಳು ಲಕ್ಷ , ಅಧಿಕಾರಿಗಳು ಬಯಸುತ್ತಿದ್ದಾರೆ ಜನರ ಲಕ್ಷ್ಯ

ಪೀರ್‌ ಪಾಶ, ಬೆಂಗಳೂರು
Published 11 ನವೆಂಬರ್ 2018, 20:15 IST
Last Updated 11 ನವೆಂಬರ್ 2018, 20:15 IST
ಸಿ.ವಿ.ರಾಮನ್‌ ನಗರದ ನಾಗವಾರಪಾಳ್ಯ ಉಪರಸ್ತೆಯಲ್ಲಿ ಕಳೆದ ವರ್ಷ ನೆಟ್ಟಿದ್ದ ಸಸಿಗಳು  –ಪ್ರಜಾವಾಣಿ ಚಿತ್ರ
ಸಿ.ವಿ.ರಾಮನ್‌ ನಗರದ ನಾಗವಾರಪಾಳ್ಯ ಉಪರಸ್ತೆಯಲ್ಲಿ ಕಳೆದ ವರ್ಷ ನೆಟ್ಟಿದ್ದ ಸಸಿಗಳು  –ಪ್ರಜಾವಾಣಿ ಚಿತ್ರ    

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮರಗಳಾಗಿ ಬೆಳೆದು ತಂಪೆರೆಯಬೇಕಿದ್ದ ಲಕ್ಷಾಂತರ ಸಸಿಗಳು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಸಾಯುತ್ತಿವೆ.

ನೆಟ್ಟ ಸಸಿಗಳಿಗೆ ಸ್ಪಷ್ಟ ಪೋಷಕರಿಲ್ಲ. ಸಸಿ ನೆಟ್ಟ ಗುತ್ತಿಗೆದಾರರು ಮರೆತುಬಿಟ್ಟಿದ್ದಾರೆ. ಪಾಲಿಕೆಯಿಂದ ಬಿಲ್‌ ಪಡೆಯಲು ಹವಣಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಪಟ್ಟು ಹಿಡಿದು ಸಸಿಗಳ ಜೀವ ಉಳಿಸಬೇಕಿದ್ದ ಪಾಲಿಕೆಯ ಅರಣ್ಯ ಘಟಕದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

2017–18ನೇ ಹಣಕಾಸು ವರ್ಷದಲ್ಲಿ ಪಾಲಿಕೆಯ ಎಂಟು ವಲಯಗಳಲ್ಲಿ ಲಕ್ಷ ಸಸಿಗಳನ್ನು ನೆಡಲಾಗಿತ್ತು. ಸಿ.ವಿ.ರಾಮನ್‌ ನಗರ, ಶಾಂತಿನಗರ, ಜಯನಗರ, ಪುಲಿಕೇಶಿನಗರ, ಸರ್ವಜ್ಞ ನಗರ, ಕೆ.ಆರ್‌.ಪುರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ದಾಸರಹಳ್ಳಿಯ ಉಪರಸ್ತೆಗಳ ಬದಿ, ಉದ್ಯಾನ, ಶಾಲಾ–ಕಾಲೇಜು ಆವರಣ, ಸರ್ಕಾರಿ ಜಮೀನುಗಳಲ್ಲಿ ನೆಟ್ಟಿದ್ದ ಬಹುತೇಕ ಸಸಿಗಳು ಈಗಾಗಲೇ ನೆಲಸಮಗೊಂಡಿವೆ. ಅಲ್ಲೊಂದು ಗಿಡವಿತ್ತು ಎಂಬ ಕುರುಹು ಕೂಡ ಆ ಜಾಗದಲ್ಲಿ ಇಲ್ಲ. ಅದರೆ, ಪ್ರತಿ ಸಸಿ ನೆಡಲು
₹ 600 ಖರ್ಚು ಮಾಡಲಾಗಿದೆ ಎಂಬ ಲೆಕ್ಕ ಮಾತ್ರ ಪಾಲಿಕೆಯ ಕಡತದಲ್ಲಿದೆ.

ADVERTISEMENT

ಗಿಡ ನಾಶ ಕಾರಣ: ವಿಧಾನಸಭಾ ಚುನಾವಣೆಯ ಮುಂಚೆ ನಡೆದ ರಸ್ತೆಗಳ ಡಾಂಬರೀಕರಣ, ಒಳಚರಂಡಿ ನಿರ್ಮಾಣ ಮತ್ತು ಹೂಳು ತೆಗೆಯುವ ಕಾಮಗಾರಿ ವೇಳೆಯೇ ರಸ್ತೆ ಬದಿಯ ನೂರಾರು ಗಿಡಗಳು ಮಣ್ಣುಪಾಲು ಆಗಿವೆ. ಇನ್ನು ಕೆಲವೆಡೆ ವಾಹನಗಳ ನಿಲುಗಡೆಗಾಗಿ, ಚಕ್ರಗಳ ಅಡಿ ಸಸಿಗಳು ಸಿಲುಕಿ ಅಪ್ಪಚ್ಚಿಯಾಗಿವೆ. ಮಳೆ–ಗಾಳಿಗೆ ಬಾಗಿ, ಬಿದ್ದು ಮತ್ತೊಂದಿಷ್ಟು ಗಿಡಗಳು ನಾಶವಾಗಿವೆ. ಇದಕ್ಕೆ ಗುತ್ತಿಗೆದಾರರು ವೈಜ್ಞಾನಿಕವಾಗಿ ಸಸಿಗಳನ್ನು ನೆಡದೆ, ಕೇವಲ ಕಾಟಾಚಾರಕ್ಕೆ ಕೆಲಸ ಮಾಡಿಸಿರುವುದೂ ಕಾರಣವಾಗಿದೆ. ತಮ್ಮ ಪ್ರದೇಶದಲ್ಲಿ ನೆಟ್ಟ ಸಸಿಗಳನ್ನು ಬೆಳೆಸಲು ಜನ ಸಹ ಆಸಕ್ತಿ ತೋರುತ್ತಿಲ್ಲ.

ಹೀಗಿದೆ ನಿಯಮ: ‘ಸಸಿ ನೆಟ್ಟ ಗುತ್ತಿಗೆದಾರ, ಅದಕ್ಕೆ ಬಿದಿರಿನಬೇಲಿಯ ಕವಚ ಅಳವಡಿಸಬೇಕು. ನೀರು ಇಂಗಲು ಆಗಾಗ ಪಾತಿ ಮಾಡಬೇಕು. ಹತ್ತು ತಿಂಗಳ ಕಾಲ ಆರೈಕೆ ಮಾಡಬೇಕು ಎಂಬ ನಿಯಮವಿದೆ’ ಎಂದು ಅಧಿಕಾರಿಗಳೇ ಹೇಳುತ್ತಾರೆ. ಆದರೆ, ಅವುಗಳನ್ನು ಗುತ್ತಿಗೆದಾರರಿಗೆ ಅನ್ವಯಿಸುವಲ್ಲಿ ಅವರೇ ಎಡವಿದ್ದಾರೆ.

ಸಿ.ವಿ.ರಾಮನ್‌ ನಗರದ ನಾಗವಾರಪಾಳ್ಯ ಉಪರಸ್ತೆಯಲ್ಲಿ ನೆಟ್ಟಿದ್ದ ಗಿಡಗಳು ಈಗ ಇಲ್ಲ –ಪ್ರಜಾವಾಣಿ ಚಿತ್ರ

‘ಶೇ 75ರಷ್ಟು ಗಿಡಗಳು ಇನ್ನೂ ಬದುಕಿವೆ’
ಸಸಿಗಳ ಸಾವಿನ ಕುರಿತು ಪಾಲಿಕೆಯ ಉಪಅರಣ್ಯ ಸಂರಕ್ಷಣಾಧಿಕಾರಿಚೋಳರಾಜನ್‌, ‘ಸಸಿ ನೆಡುವ ಯೋಜನೆಗಳಲ್ಲಿ ಶೇ 100ರಷ್ಟು ಫಲಿತಾಂಶವನ್ನು ನಿರೀಕ್ಷಿಸಲು ಆಗುವುದಿಲ್ಲ. ನಾವು ನೆಟ್ಟಿದ್ದ ಸಸಿಗಳಲ್ಲಿ ಶೇ 75ರಷ್ಟು ಬದುಕಿ ಉಳಿದಿವೆ. ಸ್ಥಳೀಯರು ಗಿಡಗಳ ಪೋಷಣೆಯಲ್ಲಿ ಕೈಜೋಡಿಸಿದರೆ ಈ ಪ್ರಮಾಣ ಇನ್ನೂ ಹೆಚ್ಚಲಿದೆ’ ಎಂದು ಹೇಳುತ್ತಾರೆ.

‘ಪಾಲಿಕೆಯಲ್ಲಿನ ಕೇವಲ ಎಂಟು ಫಾರೆಸ್ಟರ್‌ಗಳು 800 ಚದರ ಕಿ.ಮೀ ವಿಸ್ತೀರ್ಣದ ನಗರದಲ್ಲಿನ ಸಸಿಗಳ ಬೆಳವಣಿಗೆ ಮೇಲೆ ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತದೆಯೇ’ ಎಂಬುದು ಅವರ ಪ್ರಶ್ನೆ.

*ಕೆಲವು ಗುತ್ತಿಗೆದಾರರಿಗೆ ಮಾತ್ರ ಬಿಲ್‌ ಪಾವತಿ ಆಗಿದೆ. ನಿಗದಿತ ಕಾಲಾವಧಿಯವರೆಗೆ ಸಸಿಗಳನ್ನು ಆರೈಕೆ ಮಾಡದ ಗುತ್ತಿದಾರರಿಗೆ ಬಿಲ್‌ ನೀಡುವುದಿಲ್ಲ

-ಚೋಳರಾಜನ್‌ , ಉಪಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ

ನೆಟ್ಟಿರುವ ಗಿಡಗಳು

ಬೇವು, ಹೊಂಗೆ, ಮಹಾಗನಿ, ಕಾಡುಬಾದಾಮಿ, ನೇರಳೆ, ನೆಲ್ಲಿ, ತಬೂಬಿಯಾ, ಸಂಪಿಗೆ, ಜಕರಾಂಡ, ಹಲಸು.

ಪಾಲಿಕೆ ವಲಯ; ನೆಟ್ಟಿದ್ದ ಗಿಡಗಳು

ಬೊಮ್ಮನಹಳ್ಳಿ; 15,000

ರಾಜರಾಜೇಶ್ವರಿ ನಗರ;15,000

ಯಲಹಂಕ; 13,000

ಮಹದೇವಪುರ; 12,500

ದಕ್ಷಿಣ ವಲಯ; 12,500

ಪೂರ್ವ ವಲಯ; 12,500

ಪಶ್ವಿಮ ವಲಯ; 11,500

ದಾಸರಹಳ್ಳಿ; 8,000

ಒಟ್ಟು ಗಿಡಗಳು; 1,00,000

ಅಂಕಿ–ಅಂಶ

* ₹6 ಕೋಟಿ ಗಿಡಗಳನ್ನು ನೆಡಲು ಪಾಲಿಕೆ ಮೀಸಲಿಟ್ಟ ಮೊತ್ತ

* ₹600ಪ್ರತಿ ಗಿಡಕ್ಕೆ ಮಾಡಿದ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.