ಬೆಂಗಳೂರು: ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವುದಾಗಿ ಹೇಳಿದ್ದ ತಂದೆ–ಮಗ, ₹ 30 ಲಕ್ಷ ಮೌಲ್ಯದ ಚಿನ್ನ ದೋಚಿ ಪರಾರಿಯಾಗಿರುವ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಚಿನ್ನಾಭರಣ ವ್ಯಾಪಾರಿ ರಾಜೇಂದ್ರಕುಮಾರ್ ಅವರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಸ್ನೇಹಿತ ಪ್ರವೀಣ್ ಅಲಿಯಾಸ್ ಪ್ರಿನ್ಸ್ ಹಾಗೂ ಆತನ ತಂದೆ ಶಾಜಿಯಾ ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರು ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ರಾಜೇಂದ್ರಕುಮಾರ್ ಅವರು ಸಿ.ಟಿ. ಸ್ಟ್ರೀಟ್ನಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಆರೋಪಿ ಪ್ರವೀಣ್ ಸಹ ಚಿನ್ನಾಭರಣ ವ್ಯಾಪಾರಿ. 4 ವರ್ಷಗಳ ಹಿಂದೆಯಷ್ಟೇ ರಾಜೇಂದ್ರ ಅವರನ್ನು ಪರಿಚಯ ಮಾಡಿಕೊಂಡಿದ್ದ.’
‘ರಾಜೇಂದ್ರ ಅವರ ಮಳಿಗೆ ದೊಡ್ಡದಿದೆ. ಅರ್ಧ ಭಾಗವನ್ನು ಬೇರೆಯವರಿಗೆ ಬಾಡಿಗೆ ನೀಡಲು ತೀರ್ಮಾನಿಸಿದ್ದರು. ಇದನ್ನು ತಿಳಿದಿದ್ದ ಪ್ರವೀಣ್, ತನಗೆ ಬಾಡಿಗೆ ನೀಡುವಂತೆ ಕೋರಿದ್ದ. ‘ಚಿನ್ನಾಭರಣ ವ್ಯಾಪಾರವನ್ನು ಪಾಲುದಾರಿಕೆಯಲ್ಲಿ ಮಾಡೋಣವೆಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ರಾಜೇಂದ್ರ, ಗ್ರಾಹಕರೊಬ್ಬರಿಗೆ ಮಾರಾಟ ಮಾಡಲೆಂದು ತಮ್ಮ ಬಳಿಯ 4 ಕೆ.ಜಿ 644 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ನೀಡಿದ್ದರು. ಇದಾದ ನಂತರ ಆರೋಪಿ ಅಂಗಡಿಗೂ ಬಾರದೇ ತಂದೆ ಜೊತೆ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.