ADVERTISEMENT

ರಾಜೀವ್‌ ಗಾಂಧಿ ಆರೋಗ್ಯ ವಿ.ವಿಯಿಂದ ಶ್ರೇಷ್ಠತಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 5:32 IST
Last Updated 20 ನವೆಂಬರ್ 2019, 5:32 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಗರದಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಿದೆ.

ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ತಾಂತ್ರಿಕ ಶೃಂಗಸಭೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು. ಔಷಧ, ವಂಶವಾಹಿ ಚಿಕಿತ್ಸೆ (ಜೀನ್‌ ಥೆರಪಿ), ಮೆಡಿಕಲ್‌ ಎಂಜಿನಿಯರಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವ ಉದ್ದೇಶದಿಂದ ಶ್ರೇಷ್ಠತಾ ಕೇಂದ್ರ (ಸೆಂಟರ್ ಆಫ್‌ ಎಕ್ಸಲೆನ್ಸ್‌) ಸ್ಥಾಪನೆಗೊಳ್ಳಲಿದೆ. ರಾಜ್ಯದ ಇತರ ವೈದ್ಯಕೀಯ ಕಾಲೇಜುಗಳಿಗೂ ಇದರ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

‘ಆರೋಗ್ಯ ವಿಶ್ವವಿದ್ಯಾಲಯ ಕೇವಲ ಪರೀಕ್ಷೆ ನಡೆಸಿ, ಪ್ರಮಾಣಪತ್ರ ನೀಡಲಷ್ಟೇ ಸೀಮಿತವಾಗಿರಬಾರದು. ಆರೋಗ್ಯ ಕ್ಷೇತ್ರದ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಹೊಸ ಹೆಜ್ಜೆ ಇಟ್ಟಿದೆ. ಯುವ ಜನರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವಂತಾಗಬೇಕು. ರೋಗಿಗಳ ತಪಾಸಣೆಗೆ ಹೊರತಾಗಿ ವೈದ್ಯರು ಸಂಶೋಧನೆಯಲ್ಲಿ ತೊಡಗುವಂತಾಗಬೇಕು’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ಕೆಂಗೇರಿ ಬಳಿ ಕೇಂದ್ರ ಸ್ಥಾಪನೆ: ಕೆಂಗೇರಿ ಸಮೀಪದ ಭೀಮನಕುಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪನೆಯಾಗಲಿದೆ. ದೇಶದಲ್ಲಿ ಈ ರೀತಿಯ ಸಂಸ್ಥೆಗಳ ಸಂಖ್ಯೆ ಕಡಿಮೆ. ರಾಜ್ಯದಲ್ಲಿ ಈ ರೀತಿಯ ಕೇಂದ್ರ ಸ್ಥಾಪಿಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.