ADVERTISEMENT

ಡಿ.ಜೆ. ಹಳ್ಳಿ ಗಲಭೆ: ಬಾಂಬ್‌ ಸ್ಫೋಟ ಆರೋಪಿಯ ಬಾಮೈದ ಬಂಧನ

69 ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 14:58 IST
Last Updated 23 ಆಗಸ್ಟ್ 2020, 14:58 IST
ಗಲಭೆಯ ದೃಶ್ಯ
ಗಲಭೆಯ ದೃಶ್ಯ   

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ನಡೆದಿದ್ದ ಗಲಭೆಗೆ ಉಗ್ರ ಸಂಘಟನೆ ನಂಟಿರುವ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಅಲ್ ಹಿಂದ್’ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎನ್ನಲಾದ ಆರೋಪಿ ಸಮೀವುದ್ದೀನ್‌ ಎಂಬಾತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಇದೀಗ ಎಸ್‌ಡಿಪಿಐ ಕಾರ್ಯಕರ್ತ ಮೊಹಮ್ಮದ್ ಜಾವೀದ್ ಮತ್ತು ಇರ್ಷಾದ್ ಎಂಬುವರನ್ನು ಸೆರೆ ಹಿಡಿಯಲಾಗಿದೆ.

ಡಿ.ಜೆ.ಹಳ್ಳಿ ನಿವಾಸಿಯಾದ ಜಾವೀದ್, ಆಟೊ ಚಾಲಕನಾಗಿದ್ದಾನೆ. 2014ರಲ್ಲಿ ಚರ್ಚ್‌ಸ್ಟ್ರೀಟ್‌ನಲ್ಲಿ ನಡೆದಿದ್ದ ಬಾಂಬ್‌ ಸ್ಫೋಟದ ಆರೋಪಿ ಆಫ್ರಿದಿಯ ಬಾಮೈದನೂ ಆತನಾಗಿದ್ದ ಎಂದು ಗೊತ್ತಾಗಿದೆ.

ADVERTISEMENT

‘ಜಾವೀದ್‌ ಅವರ ಸಹೋದರಿಯನ್ನು ಆಫ್ರಿದಿ ಮದುವೆಯಾಗಿದ್ದಾನೆ. ಜೈಲಿನಲ್ಲಿರುವ ಆಫ್ರಿದಿ ಜತೆ ಜಾವೀದ್ ಸಂಪರ್ಕದಲ್ಲಿದ್ದ. ಆತನಿಗೆ ಊಟ ಕೊಡಲು ಹಲವು ಬಾರಿ ಜೈಲಿಗೂ ಹೋಗಿ ಬರುತ್ತಿದ್ದ. ಅವರಿಬ್ಬರ ನಡುವೆ ಗಲಭೆ ಸಂಬಂಧ ಏನಾದರೂ ಮಾತುಕತೆಯಾಗಿತ್ತಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಗಲಭೆ ನಡೆದ ದಿನದಂದು ಆರೋಪಿ ಜಾವೀದ್, ಘಟನಾ ಸ್ಥಳಕ್ಕೆ ಬಂದಿದ್ದ. ಜೊತೆಯಲ್ಲಿ ಸ್ನೇಹಿತರನ್ನು ಕರೆತಂದಿದ್ದ. ಮೊಬೈಲ್ ಕರೆಗಳ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗಲಭೆಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಉಗ್ರ ಸಂಘಟನೆ ನಂಟಿನ ಅನುಮಾನದಡಿ ತನಿಖೆ: ‘ಆರೋಪಿ ಜಾವೀದ್, ತನ್ನ ಜೊತೆಯಲ್ಲೇ ಸ್ನೇಹಿತರನ್ನು ಕರೆತಂದು ಗಲಭೆಯಲ್ಲಿ ಭಾಗಿಯಾಗಿದ್ದ. ಆತನ ಉದ್ದೇಶವೇನು ಎಂಬುದು ಗೊತ್ತಿಲ್ಲ. ಆತನಿಗೆ ಉಗ್ರ ಸಂಘಟನೆ ನಂಟು ಇದೆಯಾ ಎಂಬುದು ತನಿಖೆಯಿಂದ ತಿಳಿಯಬೇಕು. ಈತನ ಜೊತೆ ಒಡನಾಟವಿಟ್ಟುಕೊಂಡಿದ್ದ ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.