ಬೆಂಗಳೂರು: ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಪಾರಿವಾಳಕ್ಕೆ ರಾಡ್ನಿಂದ ಹೊಡೆಯುವ ವೇಳೆ ವಿದ್ಯುತ್ ಪ್ರವಹಿಸಿ ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ಚಂದ್ರು (13) ಚಿಕಿತ್ಸೆಗೆ ಸ್ಪಂದಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.
ವಿಜಯಾನಂದನಗರದಲ್ಲಿ ಡಿ. 1ರಂದು ಮಧ್ಯಾಹ್ನ ಸಂಭವಿಸಿದ್ದ ಅವಘಡದಲ್ಲಿ ಚಂದ್ರು ಹಾಗೂ ಸುಪ್ರೀತ್ (11) ತೀವ್ರ ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸುಪ್ರೀತ್ ಕೆಲ ದಿನಗಳ ಹಿಂದೆಯಷ್ಟೇ ಅಸುನೀಗಿದ್ದರು.
‘ಇಬ್ಬರೂ ಬಾಲಕರು ಕಾಲಿಗೆ ದಾರ ಕಟ್ಟಿದ್ದ ಪಾರಿವಾಳದ ಜೊತೆ ಆಟವಾಡುತ್ತಿದ್ದರು. ಪಾರಿವಾಳವನ್ನು ಹಾರಿ ಬಿಟ್ಟಿದ್ದರು. ಮನೆಯೊಂದರ ಚಾವಣಿಗೆ ಹೊಂದಿಕೊಂಡಿರುವ ವಿದ್ಯುತ್ ತಂತಿ ಮೇಲೆ ಹೋಗಿ ಪಾರಿವಾಳ ಕುಳಿತಿತ್ತು. ಅದನ್ನು ನೋಡಿದ್ದ ಇಬ್ಬರೂ ಬಾಲಕರು, ಪಾರಿವಾಳವನ್ನು ತಂತಿಯಿಂದ ಹಾರಿಸುವುದಕ್ಕಾಗಿ ಮನೆಯ ಮುಖ್ಯದ್ವಾರದ ಮೂಲಕ ಚಾವಣಿಗೆ ಹೋಗಿದ್ದರು‘ ಎಂದು ಪೊಲೀಸರು ಹೇಳಿದರು.
‘ಸ್ಥಳದಲ್ಲಿದ್ದ ಕಬ್ಬಿಣದ ರಾಡ್ನಿಂದ ಪಾರಿವಾಳಕ್ಕೆ ಹೊಡೆಯಲು ಯತ್ನಿಸಿದ್ದರು. ಆದರೆ, ತಂತಿಗೆ ರಾಡ್ ತಗುಲಿ ವಿದ್ಯುತ್ ಪ್ರವಹಿಸಿತ್ತು. ಇಬ್ಬರೂ ಬಾಲಕರು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.