ADVERTISEMENT

24ರಂದು ಬ್ರಾಹ್ಮಣ ಮಹಾಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:00 IST
Last Updated 20 ಫೆಬ್ರುವರಿ 2019, 20:00 IST

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಸ್ಥಾನಕ್ಕೆ ನಗರದ ಚಾಮರಾಜಪೇಟೆಯ ಚಂದ್ರಶೇಖರ ಕಲ್ಯಾಣ ಮಂಟಪದಲ್ಲಿ ಫೆ.24ರಂದು ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ತಮ್ಮನ್ನು ಮತ್ತೊಮ್ಮೆ ಆಯ್ಕೆ‌ ಮಾಡುವಂತೆ ಮಹಾಸಭಾದ ಅಧ್ಯಕ್ಷ ಮತ್ತು ಅಭ್ಯರ್ಥಿ ಕೆ.ಎನ್.ವೆಂಕಟನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. ಪ್ರತಿಸ್ಪರ್ಧಿಯಾಗಿ ಮೈಸೂರಿನ ಮಂಜುನಾಥ್ ಕಣಕ್ಕಿಳಿದ್ದಾರೆ.

ಅಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳ ಬ್ರಾಹ್ಮಣ ಸಮಾಜದ 24 ಸಾವಿರ ಮತದಾರರು ಮತ ಚಲಾಯಿಸಲಿದ್ದಾರೆ.

ADVERTISEMENT

ಫೆ.17ರಂದು ರಾಜ್ಯದ ಐದು ಮುಖ್ಯ ಘಟಕಗಳಾದ ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ರಾಯಚೂರಿನಲ್ಲಿ ಚುನಾವಣೆ ನಡೆದಿದೆ. 24ರಂದು ಮತದಾನ ನಡೆದ ನಂತರ ಎಲ್ಲಾ ಘಟಕಗಳ ಮತ ಎಣಿಕೆಯೂ ನಡೆಯಲಿದ್ದು, ರಾತ್ರಿಯೇ ಫಲಿತಾಂಶ ಪ್ರಕಟಿಸಲಾಗುತ್ತದೆ.

‘ಸಮುದಾಯದ ಅಭಿವೃದ್ಧಿಗೆ ಹೊಸ ದೃಷ್ಟಿಕೋನದತ್ತ ನೆಟ್ಟಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಪ್ರಾಮುಖ್ಯ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ, ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ನಿರ್ಮಾಣ, ಮಹಿಳಾ ಸಬಲೀಕರಣಕ್ಕಾಗಿ ಆದ್ಯತೆ ನೀಡುತ್ತೇನೆ’ ಎಂದು ಕೆ.ಎನ್.ವೆಂಕಟನಾರಾಯಣ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.