ಯಲಹಂಕ: ‘ರೈತರಿಗೆ ಮತ್ತು ಬಡಜನರಿಗೆ ಅನುಕೂಲವಾಗುತ್ತಿದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲು ₹360 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆಗಾಗಿ ₹100 ಕೋಟಿ ಷೇರು ಹಣವನ್ನು ಸಂಗ್ರಹಿಸಿ, ಹೊಸದಾಗಿ ಯೋಜನೆ ಜಾರಿ ಮಾಡಲಾಗುತ್ತಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಾಗದಾಸನಹಳ್ಳಿಯಲ್ಲಿ ಆಯೋಜಿಸಿದ್ದ ’ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ರೈತಮೋರ್ಚಾ ಸಮಾವೇಶ ಹಾಗೂ ಆತ್ಮನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕೆಂಬ ಎನ್ನುವ ಉದ್ದೇಶದಿಂದ ರೈತಪರ ಮಸೂದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ವಿರೋಧಪಕ್ಷದ ಷಡ್ಯಂತ್ರದಿಂದ ಮಸೂದೆ ಜಾರಿಗೆ ಬರಲಿಲ್ಲ’ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ನಮ್ಮ ಪೂರ್ವಜರ ಆಹಾರ ಕ್ರಮವಾಗಿದ್ದ ಸಿರಿಧಾನ್ಯಗಳು ಆಧುನಿಕ ಭರಾಟೆಯ ನಡುವೆ ಕಳೆದುಹೋಗಿದ್ದವು. ಇದೀಗ ಜಾಗೃತಗೊಂಡಿರುವ ಜನರು, ಸಿರಿಧಾನ್ಯ ಬಳಕೆ ಸೇರಿದಂತೆ ಸಾವಯವ ಆಹಾರದ ಕಡೆಗೆ ಒಲವು ತೋರುತ್ತಿದ್ದಾರೆ. ರೈತರು ಸಾವಯವ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.