ಬೊಮ್ಮನಹಳ್ಳಿ: ರಾಜ್ಯದ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಜನಪರ ಆಡಳಿತ ನೀಡಿದೆ. ಜನಪರ ಕಾಳಜಿ ಇರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಭಾನುವಾರ ಎಚ್ಎಸ್ಆರ್ ಬಡಾವಣೆಯಲ್ಲಿ ಬಿಜೆಪಿ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗಾಗಿ ಮೋದಿಯವರ ಕೈ ಬಲಪಡಿಸುವ ಅಗತ್ಯವಿದೆ. ಅವರ ಮಹಿಳಾ ಪರವಾದ ಹಲವು ಕಾರ್ಯಕ್ರಮಗಳು ಸಮಾನತೆಯನ್ನು ತರಲು ಸಹಕಾರಿಯಾಗಿವೆ ಎಂದರು. ಶಾಸಕ ಸತೀಶ್ ರೆಡ್ಡಿ ಅಂಬರೀಷ್ ಅವರಿಗೆ ತಮ್ಮನಂತಿದ್ದರು. ಅವರ ಅಗಲಿಕೆಯ ನಂತರವೂ, ಅದೇ ಬಾಂಧವ್ಯ ಹೊಂದಿದ್ದಾರೆ. ಮುಂದೆ ಮಂತ್ರಿ ಆಗುವ ಎಲ್ಲ ಅವಕಾಶಗಳಿದ್ದು, ಬೊಮ್ಮನಹಳ್ಳಿಯ ಮತದಾರರು ಈ ಬಾರಿಯೂ ಗೆಲ್ಲಿಸಬೇಕೆಂದರು.
ಕಾಂಗ್ರೆಸ್–ಜೆಡಿಎಸ್ ಕಳ್ಳ–ಮಳ್ಳ ಇದ್ದಂತೆ: ಆರ್.ಅಶೋಕ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವದಲ್ಲೇ ಹೊಂದಾಣಿಕೆ ಮಾಡಿಕೊಂಡು ಕಳ್ಳ-ಮಳ್ಳರಂತೆ ವರ್ತಿಸುತ್ತಿವೆ ಎಂದು ಕಂದಾಯ ಸಚಿವ ಆರ್.ಅಶೋಕ ವ್ಯಂಗ್ಯವಾಡಿದರು.
ಕಾಂಗ್ರೆಸ್ ದೇಶದೆಲ್ಲೆಡೆ ತನ್ನ ಅಸ್ತಿತ್ವ ಕಳೆದುಕೊಂಡಿದೆ. ರಾಜ್ಯದಲ್ಲೂ ಈ ಬಾರಿಯ ಚಿನಾವಣೆಯಲ್ಲಿ ಧೂಳೀಪಟವಾಗಲಿದೆ. ಅಭಿವೃದ್ಧಿಯ ಮುಂದುವರಿಕೆಗಾಗಿ ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಅಸಿಡ್ ದಾಳಿಗೆ ಒಳಗಾದ ಹೆಣ್ಣು ಮಕ್ಕಳಿಗೆ ನಮ್ಮ ಸರ್ಕಾರ ಹತ್ತು ಸಾವಿರ ರೂಪಾಯಿ ಮಾಸಾಸನ ನೀಡುತ್ತಿದೆ. ಮಹಿಳಾಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಸಮಾನತೆಯನ್ನು ತರಲು ಪ್ರಯತ್ನಿಸಿದೆ ಎಂದು ಹೇಳಿಕೊಂಡರು.
ಶಾಸಕ ಸತೀಶ್ ರೆಡ್ಡಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ನಾಗರಿಕ ಸೌಲಭ್ಯಗಳು ದೊರಕುವಂತೆ, ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಖರ್ಚು ಮಾಡಲಾಗಿದೆ’ ಎಂದರು.
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ನಟ ದರ್ಶನ್, ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಇದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.