ಬೆಂಗಳೂರು: ‘ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ (ಜೆಎನ್ಯು) ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಎಂದು ಪುನರ್ನಾಮಕರಣ ಕುರಿತು ಚರ್ಚೆ ನಡೆದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ‘ಅಂತಹದ್ದೊಂದು ಚರ್ಚೆ ನಡೆದಿರು
ವುದು ನಿಜ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
‘ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು, ಮಾಜಿ ಪ್ರಧಾನಿಯೂ ಆಗಿದ್ದರು. ಅವರ ಹೆಸರನ್ನು ದೇಶದ ಸಾಕಷ್ಟು ಸಂಸ್ಥೆಗಳಿಗೆ ಇಡಲಾಗಿದೆ. ವಿವೇಕಾನಂದರ ವ್ಯಕ್ತಿತ್ವವು ಎಲ್ಲರಿಗೂ ಪ್ರೇರಣದಾಯಕವಾಗಿದೆ. ಇಬ್ಬರ ವ್ಯಕ್ತಿತ್ವನ್ನು ಹೋಲಿಸಿ ನೋಡಿದಾಗ ಈ ವಿಚಾರ ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಬಗ್ಗೆ ಅರಿವಿಲ್ಲ. ಆರ್ಎಸ್ಎಸ್ ಒಂದು ತತ್ವಬದ್ಧ ರಾಷ್ಟ್ರಭಕ್ತ ಸಂಘಟನೆ. ಅದು ಯಾವುದೇ ಜಾತಿಯನ್ನು ಪ್ರತಿನಿಧಿಸುವ ಸಂಸ್ಥೆಯಲ್ಲ. ದೇಶಕ್ಕಾಗಿ ಕೆಲಸ ಮಾಡಿದ ಎಲ್ಲ ವ್ಯಕ್ತಿಗಳನ್ನೂ ಸಂಘ ಗೌರವಿಸುತ್ತದೆ. ಅಬ್ದುಲ್ ಕಲಾಂ ಅವರಿಗೆ ಸಂಘದಲ್ಲಿ ಸ್ಥಾನ ಸಿಕ್ಕಿದ್ದು ಅವರ ದೇಶ ಭಕ್ತ ಹಿನ್ನೆಲೆಯ ಕಾರಣ. ಕನಕದಾಸರಿಗೆ ಸಂಘದಲ್ಲಿ ಸ್ಥಾನ ಸಿಕ್ಕಿದ್ದು ಅವರ ಜಾತಿಯ ಕಾರಣಕ್ಕಲ್ಲ. ಅವರ ಬದುಕಿನ ರೀತಿ, ಸಾಮಾಜಿಕ ಪರಿವರ್ತನೆ ಮಾಡಿದ ಕಾರಣಕ್ಕೆ’ ಎಂದರು.
***
ಲವ್ ಜಿಹಾದ್, ಗೋಹತ್ಯೆ ನಿಷೇಧಕ್ಕೆ ಕಾಯ್ದೆ
ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧಕ್ಕೆ ಕಾಯ್ದೆಗಳನ್ನು ಜಾರಿಗೆ ತರಲು ಬಿಜೆಪಿ ಪ್ರಮುಖ ನಾಯಕರ ಸಭೆಯಲ್ಲಿ ಸಹಮತ ವ್ಯಕ್ತ ಆಗಿರುವುದರಿಂದ, ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಸಿ.ಟಿ.ರವಿ ಹೇಳಿದರು.
‘ಗೋಹತ್ಯೆ ನಿಷೇಧ ಕಾನೂನು ಜಾರಿ ತರಬೇಕು ಎಂಬ ಕೂಗು ಪ್ರಬಲವಾಗಿದೆ, ಹೀಗಾಗಿ ಕಠಿಣ ಕಾನೂನು ಜಾರಿಗೆ ತರಲಾಗುವುದು. ಈ ಸಂಬಂಧ ಪಶುಸಂಗೋಪನಾ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎರಡು ಮಸೂದೆ ಮಂಡನೆಯಾಗಲಿದೆ’ ಎಂದು ತಿಳಿಸಿದರು.
*****
ಆರ್ಎಸ್ಎಸ್ ಬಗ್ಗೆ ಅರಿವು ಬರಬೇಕಿದ್ದರೆ ಸಿದ್ದರಾಮಯ್ಯ ಸಂಘದ ಶಾಖೆಗೆ ಬರಲಿ. ಆರ್ಎಸ್ಎಸ್ ಕುರಿತಂತೆ
ಅವರ ಹೇಳಿಕೆ ಕುರುಡರು ಆನೆಯನ್ನು ಮುಟ್ಟಿ ವ್ಯಾಖ್ಯಾನ ಮಾಡಿದಂತಿದೆ
ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.