ಬೆಂಗಳೂರು: ಬಿಎಂಟಿಸಿ ಪುನರುಜ್ಜೀವಗೊಳಿಸಲು ಅಥವಾ ಸುಧಾರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಆನ್ಲೈನ್ ಮೂಲಕ ಅಭಿಯಾನ ನಡೆಸುತ್ತಿದೆ. ಈ ಅಭಿಯಾನಕ್ಕೆ 600ಕ್ಕೂ ಹೆಚ್ಚು ಜನ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದ್ದಾರೆ.
‘ಬಿಎಂಟಿಸಿ ಪುನರುಜ್ಜೀವಗೊಳಿಸುವ ದೂರದೃಷ್ಟಿಯಿಂದ ಯೋಜನೆಯೊಂದನ್ನು ರೂಪಿಸಲಾಗಿದ್ದು, ಇದಕ್ಕಾಗಿ ₹700 ಕೋಟಿ ಅನುದಾನ ಬೇಕಾಗಿದೆ. ಆದರೆ, ಈ ಹಣಕ್ಕಾಗಿ ಸರ್ಕಾರ ವಿದೇಶಿ ಬ್ಯಾಂಕ್ಗಳ ಮೊರೆಹೋಗಲು ಸೂಚಿಸಿದೆ. ಆದರೆ, ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಸುರಿಯುತ್ತಿದೆ. ಈ ತಾರತಮ್ಯ ಏಕೆ’ ವೇದಿಕೆಯು ಪ್ರಶ್ನಿಸಿದೆ.
‘ಬಿಎಂಟಿಸಿ ಪುನರುಜ್ಜೀವಗೊಳಿಸಲು ರಾಜ್ಯಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ವೇದಿಕೆಯು ಮನವಿ ಮಾಡಿತ್ತು.
‘ಮೆಟ್ರೊ ರೈಲಿನಲ್ಲಿ ನಿತ್ಯ ಲಕ್ಷ ಜನ ಓಡಾಡಿದರೆ, ಬಸ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಬಸ್ ವ್ಯವಸ್ಥೆಗೆ ಆರ್ಥಿಕ ನೆರವು ನೀಡಿದರೆ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಆಗುತ್ತದೆ’ ಎಂದು ವೇದಿಕೆಯ ಸದಸ್ಯರಾದ ರಾಮದಾಸ್ ರಾವ್, ಉದಿತ್ ಖಂಡೇಲ್ವಾಲ್, ಆರ್. ಜೆನಿಸಿಯಾ, ಲೇಖಾ ಅಡವಿ, ಶಹೀನ್ ಶಾಸ, ವಿನಯ್ ಶ್ರೀನಿವಾಸ್ ಹೇಳಿದ್ದಾರೆ.
‘ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಬಿಎಂಟಿಸಿಗೆ ಯಾವುದೇ ಆರ್ಥಿಕ ನೆರವು ನೀಡದಿರುವುದು ಬೇಸರದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ ಹಾವಳಿಯಿಂದ ಬಿಎಂಟಿಸಿ ಇಂದು ಸಂಕಷ್ಟದಲ್ಲಿದೆ. ಸಿಬ್ಬಂದಿ ವೇತನ ಪಾವತಿಗೂ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಸಂಸ್ಥೆಯ ನೆರವಿಗೆ ಬಂದು ವೇತನ ಪಾವತಿಗೆ ಆರ್ಥಿಕ ನೆರವು ನೀಡಿದ್ದು ಸ್ವಾಗತಾರ್ಹ. ಆದರೆ, ಅದರ ಜತೆಗೆ ಸಂಸ್ಥೆಯ ಪುನರುಜ್ಜೀವನ ಕೂಡ ಸರ್ಕಾರದ ಕರ್ತವ್ಯ’ ಎಂದು ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿಯಾನ ಬೆಂಬಲಿಸುವವರು ಈ ಲಿಂಕ್ ಬಳಸಿ ಸಹಿ ಹಾಕಬಹುದು:https://docs.google.com/forms/d/1F67uIN05YZU7D984eO4iMpTCMi6XN2m4W2MGlwQJZJw/edit
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.