
ಬೆಂಗಳೂರು: ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ ಬಿಎಂಟಿಸಿ ಚಾಲಕನ ಮೇಲೆ ದ್ವಿಚಕ್ರ ವಾಹನ ಸವಾರ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಎಂಟಿಸಿ ಚಾಲಕ ಸಂತೋಷ್ ಹಲ್ಲೆಗೆ ಒಳಗಾದವರು. ಸಂತೋಷ್ ಅವರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಗಡೆ ನಗರ ಸಮೀಪದ ನೂರ್ ನಗರದ ನಿವಾಸಿ ಅಪ್ಸಲ್ ಎಂಬುವವರನ್ನು ಬಂಧಿಸಿದ್ದಾರೆ.
ಡಿಪೋ ನಂಬರ್ 11ರಲ್ಲಿ ಕಾರ್ಯನಿರ್ವಹಿಸುವ ಚಾಲಕ ಕಂ ನಿರ್ವಾಹಕ ಸಂತೋಷ್ ಅವರು ಶುಕ್ರವಾರ ರಾತ್ರಿ 8.30ರ ವೇಳೆ ಹೆಗಡೆ ನಗರ ಮಾರ್ಗವಾಗಿ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಸಮೀಪದ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದೆ ಮುಂದೆ ಹೋಗಿ ನಿಲ್ಲಿಸಿದ್ದಾರೆ. ಭಾರತಿ ಸಿಟಿ ಸಿಗ್ನಲ್ ಬಳಿ ಬಸ್ ಅನ್ನು ಅಡ್ಡಗಟ್ಟಿದ ಆರೋಪಿ, ಬಸ್ ನಿಲ್ದಾಣದಲ್ಲಿ ಏಕೆ ನಿಲ್ಲಿಸಲಿಲ್ಲ ಎಂದು ಜಗಳವಾಡಿದ್ದು, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಆಕ್ರೋಶಗೊಂಡ ಅಪ್ಸಲ್, ಕರ್ತವ್ಯನಿರತ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಚಾಲಕ ಬಸ್ ಸಮೇತ ಠಾಣೆಗೆ ತೆರಳಿ ದೂರು ನೀಡಿದ್ದರು.
‘ಆರೋಪಿ ತಾನು ಮದುವೆಯಾಗುವ ಹುಡುಗಿಯನ್ನು ಬಸ್ ಹತ್ತಿಸಲು ಬೈಕ್ನಲ್ಲಿ ಕರೆದುಕೊಂಡು ಬಂದು ಬಸ್ಗಾಗಿ ಕಾಯುತ್ತಿದ್ದ. ಆದರೆ, ಚಾಲಕ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.