ಬೊಮ್ಮನಹಳ್ಳಿ: ಶಾಸಕ ಸತೀಶ್ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೆ, ರೆಡ್ಡಿ ಸಮುದಾಯಕ್ಕೆ ತಾರತಮ್ಯ ಮಾಡಲಾಗಿದೆ ಎಂದು ಖಂಡಿಸಿ, ಕರ್ನಾಟಕ ರೆಡ್ಡಿ ಜನ ಸಂಘದ ಸದಸ್ಯರು ಕೋರಮಂಗಲದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಮೆರವಣಿಗೆ ಮೂಲಕ ಸರ್ಜಾಪುರ ರಸ್ತೆಯ ವಾಟರ್ ಟ್ಯಾಂಕ್ ಬಸ್ ನಿಲ್ದಾಣದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರೆಡ್ಡಿ ಸಮುದಾಯದವರು,ಶಾಸಕ ಸತೀಶ್ ರೆಡ್ಡಿ ಪರ ಘೋಷಣೆ ಕೂಗಿದರು.
‘ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೆಡ್ಡಿ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯದ ದೊಡ್ಡ ಸಮುದಾಯವೊಂದನ್ನು ಕಡೆಗಣಿಸಿರುವುದು ಸರಿಯಲ್ಲ. ಮೂರು ಬಾರಿ ಶಾಸಕರಾಗಿರುವ ಸತೀಶ್ ರೆಡ್ಡಿಯವರಿಗೆ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎರೆಹೊಸಹಳ್ಳಿಯ ವೇಮನಾನಂದ ಸ್ವಾಮೀಜಿ,‘ಪ್ರಬಲ ರೆಡ್ಡಿ ಸಮುದಾಯವನ್ನು ಕಡೆಗಣಿಸಿರುವುದು ಅಕ್ಷಮ್ಯ. ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿ ನಾಲ್ವರು ಸಮುದಾಯವನ್ನು ಪ್ರತಿನಿಧಿಸಿದ್ದರು. ಕೇವಲ ಒಂದು ಸಮುದಾಯದ ಓಲೈಕೆಗೆ ನಿಂತಿರುವ ಬಿಜೆಪಿಯ ನಡೆಯೇ ಮುಂದಿನ ದಿನಗಳಲ್ಲಿ ಮುಳುವಾಗಿ ಪರಿಣಮಿಸಲಿದೆ’ ಎಂದರು.
ಸ್ಥಳೀಯ ಮುಖಂಡ ಎಸ್.ಕೆ.ನಟರಾಜ್,‘ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾದರೆ ಸತೀಶ್ ರೆಡ್ಡಿ ಅವರಿಗೆ ಅಧಿಕಾರ ನೀಡಬೇಕು’ ಎಂದು ಹೇಳಿದರು.
ರೆಡ್ಡಿಜನ ಸಂಘದ ಅಧ್ಯಕ್ಷ ಜಯರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಕೃಷ್ಣಾರೆಡ್ಡಿ, ನಿರ್ದೇಶಕ ಶೇಖರ್ ರೆಡ್ಡಿ, ಮಂಜುನಾಥ ರೆಡ್ಡಿ, ಸಾಯಿಬಾಬಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ ರೆಡ್ಡಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.