ಬೆಂಗಳೂರು: ಸುಂಕೇನಹಳ್ಳಿ ವಾರ್ಡ್ನಲ್ಲಿ ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಬುಲೇವಾರ್ಡ್ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್ನಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನೀಡುವ ಪ್ರಸ್ತಾಪವನ್ನು ಬಿಬಿಎಂಪಿ ತಿರಸ್ಕರಿಸಿದೆ.
‘ಅದು ಉದ್ಯಾನದ ಜಾಗ. ಹಾಗಾಗಿ ಅನ್ಯ ಉದ್ದೇಶಕ್ಕೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ನ ನಗರ ಜಿಲ್ಲಾ ಘಟಕದ ಮನವಿಯನ್ನು ತಿರಸ್ಕರಿಸಿದ್ದೇವೆ. ಸಾಹಿತ್ಯ ಪರಿಷತ್ಗೆ ಇದಕ್ಕಿಂತಲೂ ಉತ್ತಮವಾದ ಜಾಗವನ್ನು ನೀಡುತ್ತೇವೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆ.ಆರ್.ರಸ್ತೆ ಪಕ್ಕದಲ್ಲಿರುವ 142 x47 ಅಡಿ ಜಾಗವನ್ನು ನೀಡುವಂತೆ ಪರಿಷತ್ತಿನಬೆಂಗಳೂರು ನಗರ ಜಿಲ್ಲಾ ಘಟಕವು ಮೂರು ವರ್ಷಗಳ ಹಿಂದೆ ಪಾಲಿಕೆಯನ್ನು ಕೋರಿತ್ತು. ’ಅದು ಪಾಲಿಕೆಯ ಬುಲೇವಾರ್ಡ್ ಜಾಗ. ಇಲ್ಲಿ ಈ ಹಿಂದೆ ಸಾಕಷ್ಟು ಮರಗಳಿದ್ದವು. ಮೆಟ್ರೊ ಕಾಮಗಾರಿ ಸಲುವಾಗಿ ಈ ಜಾಗವನ್ನು ಬಿಟ್ಟು ಕೊಡಲಾಗಿತ್ತು. ಅಲ್ಲಿ ಮತ್ತೆ ಬುಲೇವಾರ್ಡ್ ನಿರ್ಮಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದರು.
‘ಇಲ್ಲಿ ಜಲಮಂಡಳಿ ಕಚೇರಿಯಿಂದ ಮಹಿಳಾ ಸಮಾಜ ಶಾಲೆಯವರೆಗೂ ಉದ್ಯಾನ ಇತ್ತು. ಮೆಟ್ರೊ ನಿಲ್ದಾಣಕ್ಕಾಗಿ ಸಾಕಷ್ಟು ಮರಗಳನ್ನು ಕಳೆದುಕೊಂಡಿದ್ದೇವೆ. ಇಲ್ಲಿ ಮತ್ತಷ್ಟು ಕಟ್ಟಡ ಬರುವುದು ಬೇಡ ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ಜಾಗದ ಬದಲು ಬೇರೆ ಜಾಗ ನೀಡುವಂತೆ ಕೋರಿದ್ದೆವು. ನಮ್ಮ ಬೇಡಿಕೆಯನ್ನು ಪಾಲಿಕೆ ಕೊನೆಗೂ ಮನ್ನಿಸಿರುವುದು ತೃಪ್ತಿ ತಂದಿದೆ’ ಎಂದು ಸ್ಥಳೀಯ ನಿವಾಸಿ ಕೆ.ಮುರಳೀಧರ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯು 2011ರಲ್ಲೇ ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಬಯಲು ಪ್ರದೇಶ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ– 1985ರ ಪ್ರಕಾರ ಪಾಲಿಕೆ ವ್ಯಾಪ್ತಿಯ ಉದ್ಯಾನ ಹಾಗೂ ಆಟದ ಮೈದಾನಗಳನ್ನು ಗುರುತಿಸಿ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಉದ್ಯಾನಗಳ ಪಟ್ಟಿಯಲ್ಲಿ ಕೆ.ಆರ್.ರಸ್ತೆ ಪಕ್ಕದ ಬುಲೇವಾರ್ಡ್ಗಳೂ ಸೇರಿವೆ. ಉದ್ಯಾನ ಎಂದು ಗುರುತಿಸಿದ ಜಾಗವನ್ನು ಮಾರಾಟ ಮಾಡುವುದು, ಉಡುಗೊರೆ ನೀಡುವುದು, ಅಡಮಾನ ಇಡುವುದು, ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡುವುದಕ್ಕೆ ಅವಕಾಶವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.