ಬೆಂಗಳೂರು: ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಪಾನಮತ್ತರಾಗಿ ತಿಲಕನಗರ ಮುಖ್ಯರಸ್ತೆಯಲ್ಲಿ ಕಾರು ಚಲಾಯಿಸಿ ಸರಕು ಸಾಗಣೆ ಆಟೊಗೆ ಡಿಕ್ಕಿ ಹೊಡೆದ ವಕೀಲೆ, ಪೊಲೀಸರ ಜತೆ ಸುಮಾರು ಒಂದು ತಾಸು ರಂಪಾಟ ನಡೆಸಿದ ಘಟನೆ ನಡೆದಿದೆ.
‘ವಕೀಲೆ ವಿರುದ್ಧ ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸಿ, ಕಾರು ಜಪ್ತಿ ಮಾಡಲಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದೆ. ಆಟೊ ಹಿಂಭಾಗಕ್ಕೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ತಿಲಕನಗರ ಪೊಲೀಸರು ತಿಳಿಸಿದರು.
ತಿಲಕನಗರದ ಮುಖ್ಯರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದ ಸರಕು ಸಾಗಣೆ ಆಟೊದ ಹಿಂಬದಿಗೆ ವಕೀಲೆ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಅದನ್ನು ಗಮನಿಸಿದ ಸ್ಥಳೀಯರು, ಕಾರಿನಲ್ಲಿದ್ದ ವಕೀಲೆಯನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ, ಅವರು ಕಾರಿನಿಂದ ಕೆಳಗೆ ಇಳಿಯಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಸೂಚಿಸಿದರೂ, ಕಾರಿನಿಂದ ಇಳಿಯದ ವಕೀಲೆ, ಪೊಲೀಸರ ಜತೆ ರಂಪಾಟ ನಡೆಸಿದ್ದಾರೆ.
ಬಳಿಕ ಮಹಿಳಾ ಪೊಲೀಸರು ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.