ADVERTISEMENT

ಕಾರು ಚಾಲಕರ ನಡುವೆ ಗಲಾಟೆ; ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:52 IST
Last Updated 5 ಜುಲೈ 2019, 19:52 IST
ಟ್ರಿನಿಟಿ ವೃತ್ತದ ನಡುರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಪೊಲೀಸರು ಟೋಯಿಂಗ್ ಮಾಡಿದರು
ಟ್ರಿನಿಟಿ ವೃತ್ತದ ನಡುರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಪೊಲೀಸರು ಟೋಯಿಂಗ್ ಮಾಡಿದರು   

ಬೆಂಗಳೂರು: ನಗರದ ಟ್ರಿನಿಟಿ ವೃತ್ತದಲ್ಲಿ ಶುಕ್ರವಾರ ಸಂಜೆ ಕಾರು ಚಾಲಕರಿಬ್ಬರು ನಡುರಸ್ತೆಯಲ್ಲೇ ಗಲಾಟೆ ಮಾಡಿದ್ದರಿಂದ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ದಟ್ಟಣೆ ಉಂಟಾಯಿತು.

ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಹೊರಟಿದ್ದ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಅಷ್ಟಕ್ಕೆ ಕಾರಿನಿಂದ ಇಳಿದಿದ್ದ ಚಾಲಕರಿಬ್ಬರು, ಪರಸ್ಪರ ಬೈದುಕೊಳ್ಳಲಾರಂಭಿಸಿದ್ದರು.

ಹತ್ತು ನಿಮಿಷ ನಡೆದ ಅವರಿಬ್ಬರ ಗಲಾಟೆಯಿಂದ ಎರಡೂ ಕಾರುಗಳು ರಸ್ತೆಯಲ್ಲೇ ಇದ್ದವು. ಅವುಗಳ ಹಿಂದೆಯೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂದಕ್ಕೆ ಹೋಗಲು ಸಹ ಜಾಗವಿರಲಿಲ್ಲ. ಟ್ರಿನಿಟಿ ವೃತ್ತದಿಂದ ಹಲಸೂರು ಸಿಗ್ನಲ್‌ವರೆಗೂ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ಮೆಟ್ರೊ ಕಾಮಗಾರಿ ನಿಮಿತ್ತ ಕಾಮರಾಜ ರಸ್ತೆ ಬಂದ್‌ ಆಗಿದ್ದು, ಪರ್ಯಾಯ ಮಾರ್ಗದ ಮೂಲಕ ಬಂದಿದ್ದ ಚಾಲಕರು ದಟ್ಟಣೆಯಿಂದ ಸಿಲುಕಿ ಪರದಾಡುವಂತಾಯಿತು. ಕೆಲವರು ಕಾರಿನಿಂದ ಇಳಿದು, ಗಲಾಟೆ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು.

ಅಷ್ಟರಲ್ಲೇ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ‘ಟೈಗರ್’ ವಾಹನದ ಮೂಲಕ ಎರಡೂ ಕಾರುಗಳನ್ನು ಟೋಯಿಂಗ್ ಮಾಡಿಕೊಂಡು ಹೋದರು. ನಂತರವೇ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.