ADVERTISEMENT

ಕಾಂಗ್ರೆಸ್‌ನ ಬಣ್ಣದ ಮಾತುಗಳಿಗೆ ಮರುಳಾಗಬೇಡಿ: ಚಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 20:47 IST
Last Updated 11 ಜುಲೈ 2021, 20:47 IST
ಸಭೆಯಲ್ಲಿ ಚಲವಾದಿ ನಾರಾಯಣಸ್ವಾಮಿ ಮಾತನಾಡಿದರು
ಸಭೆಯಲ್ಲಿ ಚಲವಾದಿ ನಾರಾಯಣಸ್ವಾಮಿ ಮಾತನಾಡಿದರು   

ಕೆ.ಆರ್.ಪುರ: ‘ದಲಿತರಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆದ್ದಿದ್ದಾರೆ’ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಹೇಳಿದರು.

ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳನ್ನು ದಲಿತರಿಗೆ ನೀಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗುವ ಕಾರ್ಯವಾಗಿದೆ. ದಲಿತರಿಗೆ ಹೆಚ್ಚಿನ ಅವಕಾಶಗಳು ಸಿಗಲು ಇಷ್ಟು ವರ್ಷಗಳು ಕಾಯಬೇಕಾಯಿತು. ಕೊನೆಗೆ ಬಿಜೆಪಿಯಿಂದ ಮಾತ್ರ ಸಾಧ್ಯವಾಯಿತು’ ಎಂದರು.

‘ನೆಪ ಮಾತ್ರಕ್ಕೆ ಕಾಂಗ್ರೆಸ್ ದಲಿತರನ್ನು ಓಲೈಸಿ ಮತ ಪಡೆಯುತ್ತಿತ್ತು. ದಲಿತರನ್ನು ಬಳಸಿಕೊಂಡಿರುವ ಕಾಂಗ್ರೆಸ್‌ ಅವರಿಗೆ ಉನ್ನತ ಸ್ಥಾನಮಾನ ನೀಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಇನ್ನಾದರೂ ದಲಿತರು ಕಾಂಗ್ರೆಸ್‌ನ ಬಣ್ಣದ ಮಾತುಗಳಿಗೆ ಬಲಿಯಾಗದೆ ಬಿಜೆಪಿಯನ್ನು ಬಲ ಪಡಿಸಿದರೆ ಮತ್ತಷ್ಟು ಅಭಿವೃದ್ದಿಯ ಜೊತೆ ಉನ್ನತ ಸ್ಥಾನಗಳನ್ನು ಪಡೆಯಬಹುದಾಗಿದೆ’ ಎಂದರು.

ADVERTISEMENT

ಮೋರ್ಚಾದ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಹೂಡಿ ಮಂಜುನಾಥ್, ಕ್ಷೇತ್ರಾಧ್ಯಕ್ಷ ಮನೋಹರ್ ರೆಡ್ಡಿ, ನಟರಾಜ್, ಮುಖಂಡರಾದ ರಾಜಾರೆಡ್ಡಿ, ರಮೇಶ್, ಕೆ.ಡಿ.ವೆಂಕಟೇಶ್, ಎಲ್.ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.