ಬೆಂಗಳೂರು: ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಬಂದಿದ್ದ ಕಾಂತಮ್ಮ (50) ಎಂಬುವರಿಗೆ ವೃದ್ಧಾಪ್ಯ ವೇತನ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕನೊಬ್ಬ, ಚಿನ್ನಾಭರಣ ಪಡೆದುಕೊಂಡು ಪರಾರಿಯಾಗಿದ್ದಾನೆ.
ಆ ಸಂಬಂಧ ಕಾಂತಮ್ಮ, ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದಾರೆ.
‘ಅನಾರೋಗ್ಯದಿಂದ ಬಳಲು ತ್ತಿರುವ ಪತಿಗೆ ಚಿಕಿತ್ಸೆ ಕೊಡಿಸಲು ಇದೇ 23ರಂದು ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿಂದ ವಾಪಸ್ ಬರುವಾಗ ಆಸ್ಪತ್ರೆಯ ಪ್ರವೇಶ ದ್ವಾರದಲ್ಲೇ ಅಪರಿಚಿತನೊಬ್ಬ ಭೇಟಿಯಾಗಿದ್ದ’ ಎಂದು ಕಾಂತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘ವೃದ್ಧಾಪ್ಯ ವೇತನ ಕೊಡಿಸುವುದಾಗಿ ಹೇಳಿದ್ದ ಅಪರಿಚಿತ, ನನ್ನ ಫೋಟೊ ತೆಗೆಸಬೇಕೆಂದು ಹೇಳಿ ಶಿವಾಜಿ ನಗರ ಬಸ್ ನಿಲ್ದಾಣ ಬಳಿ ಕರೆ ದೊಯ್ದಿದ್ದ. ಕೊರಳಲ್ಲಿದ್ದ ಚಿನ್ನದ ಸರಗಳು ಫೋಟೊದಲ್ಲಿ ಬಂದರೆ, ವೃದ್ಧಾಪ್ಯ ವೇತನ ಸಿಗುವುದಿಲ್ಲವೆಂದು ಹೇಳಿ ಬಿಚ್ಚಿಸಿಕೊಂಡಿದ್ದ. ಆಭರಣಗಳನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡಿದ್ದ. ಛಾಯಾಗ್ರಾಹಕ ನನ್ನು ಕರೆತರುವುದಾಗಿ ಹೇಳಿ ಸ್ಥಳದಿಂದ ಹೊರಟು ಹೋದ ಆತ, ವಾಪಸ್ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.
ಕಮರ್ಷಿಯಲ್ ಪೊಲೀಸರು, ‘ವೃದ್ಧೆ ಬಳಿ ಚಿನ್ನಾಭರಣ ಇರುವುದನ್ನು ನೋಡಿಕೊಂಡೇ ಆರೋಪಿ ಕೃತ್ಯ ಎಸಗಿದ್ದಾನೆ. ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.