ಬೆಂಗಳೂರು: ಖಾಲಿ ರಟ್ಟಿಗೆ ಹಿತ್ತಾಳೆ ಹಾಗೂ ತಾಮ್ರ ಲೇಪಿಸಿ ಪುರಾತನ ಕಾಲದ ಲೋಹವೆಂದು ಹೇಳಿ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿ ಸುಬ್ರಮಣ್ಯ ಅಲಿಯಾಸ್ ಬಾಲಸುಬ್ರಹ್ಮಣ್ಯ (63) ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
‘ಹೈದರಬಾದ್ನ ಸುಬ್ರಮಣ್ಯ, ಇದೇ 7ರಂದು ಆರ್ಟಿಒ ಕಾಂಪ್ಲೆಕ್ಸ್ ಬಳಿ ಲೋಹ ಲೇಪಿತ ರಟ್ಟು ಮಾರಾಟ ಮಾಡುತ್ತಿದ್ದ. ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಎರಡು ರಟ್ಟು ಜಪ್ತಿ ಮಾಡಲಾಗಿದೆ. ಆತ, ನಗರದ ಹಲವರಿಗೆ ರಟ್ಟು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಲೋಹ ಲೇಪಿತ ರಟ್ಟನ್ನು ಜನರಿಗೆ ತೋರಿಸುತ್ತಿದ್ದ ಆರೋಪಿ, ‘ಇದು ಪುರಾತನ ಕಾಲದ ವಸ್ತು. ಅಂದಿನ ಕಾಲದ ರಾಜರು ಬಳಕೆ ಮಾಡುತ್ತಿದ್ದರು. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಕಷ್ಟಗಳೆಲ್ಲ ಪರಿಹಾರವಾಗುತ್ತವೆ. ಹಣಕಾಸಿನ ವ್ಯವಹಾರ ಸುಧಾರಿಸಿ ಕೈ ತುಂಬ ಹಣ ಸಿಗುತ್ತದೆ’ ಎನ್ನುತ್ತಿದ್ದ. ಅದನ್ನು ನಂಬುತ್ತಿದ್ದ ಜನ, ರಟ್ಟು ಖರೀದಿಸಿ ಪೂಜೆ ಸಹ ಮಾಡುತ್ತಿದ್ದರು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.