ಬೆಂಗಳೂರು: ‘ವಿದ್ವಾನ್ ಚಿಂತಲಪಲ್ಲಿ ಕೃಷ್ಣಮೂರ್ತಿ ಸ್ನೇಹಜೀವಿಯಾಗಿ ಬದುಕಿದವರು. ಅವರ ಮನಸ್ಸು ಸದಾ ಕಾಲ ಸಂಗೀತದ ಕುರಿತು ತುಡಿಯುತ್ತಿತ್ತು. ಯಾರೂ ಎಲ್ಲೇ ಸಿಕ್ಕರೂ ಸಂಗೀತದ ಬಗ್ಗೆಯೇ ಮಾತನಾಡುತ್ತಿದ್ದರು’ ಎಂದು ವಿದ್ವಾನ್ ಟಿ.ಎಸ್.ಚಂದ್ರಶೇಖರ್ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ವಾನ್ ಚಿಂತಲಪಲ್ಲಿ ಕೃಷ್ಣಮೂರ್ತಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದೊಮ್ಮೆ ನಡೆದಿದ್ದ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಅವರು ಒಂದು ಗಂಟೆ ಕಲ್ಯಾಣಿ ರಾಗ ಹಾಡಿ ಎಲ್ಲರನ್ನು ಬೆರಗುಗೊಳಿಸಿದ್ದರು. ಶಂಕರಾಭರಣ ರಾಗದ ಬಗ್ಗೆ ಒಂಬತ್ತು ತಿಂಗಳು ಪಾಠ ಮಾಡಿದ್ದರು. ಸಂಗೀತದ ಬಗ್ಗೆ ಅವರು ಹೊಂದಿದ್ದ ಪಾಂಡಿತ್ಯಕ್ಕೆ ಇದೊಂದು ನಿದರ್ಶನ. ಯಾರು ಏನೇ ಕೇಳಿದರೂ ಕೋಪಿಸಿಕೊಳ್ಳದೆ ಹೇಳಿಕೊಡುತ್ತಿದ್ದರು’ ಎಂದರು.
ಲೇಖಕ ವಿ.ವಿ.ಗೋಪಾಲ್, ‘ಕೃಷ್ಣಮೂರ್ತಿ ಅವರು ಅಂತರ್ಮುಖಿಯಾಗಿದ್ದರು. ಸಂಗೀತದ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರದ ನನ್ನಂತಹ ವ್ಯಕ್ತಿಯಲ್ಲೂ ಅವರು ಸಂಗೀತದ ಅಭಿರುಚಿ ಬೆಳೆಸಿದರು. ಸಂಗೀತದ ಶಕ್ತಿಯನ್ನು ತಿಳಿಸಿ ಹೇಳಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.