ADVERTISEMENT

ಬಸವನಗುಡಿ ಠಾಣೆಗೆ ವರ್ಗಾವಣೆಯಾದ ಗುರುರಾಘವೇಂದ್ರ ಬ್ಯಾಂಕ್‌ ದೂರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 21:01 IST
Last Updated 8 ಜೂನ್ 2020, 21:01 IST

ಬೆಂಗಳೂರು: ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮಣೂರು ವಾಸುದೇವ ಮಯ್ಯ 2012ರಿಂದ 2018ರ ನಡುವೆ ಕೋಟ್ಯಂತರ ರೂಪಾಯಿ ಸಾಲವನ್ನು ಭದ್ರತೆ ಇಲ್ಲದೆ ನೀಡುವ ಮೂಲಕ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಮೊದಲಿಗೆ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಬ್ಯಾಂಕ್‌ ಬಸವನಗುಡಿ ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಬಸವನಗುಡಿಗೆ ವರ್ಗಾಯಿಸಲಾಗಿದೆ. ಎಲ್ಲ ದಾಖಲೆಗಳನ್ನು ಅಲ್ಲಿಂದ ಹಸ್ತಾಂತರಿಸಲಾಗಿದೆ.

ಆರೋಪಿಗಳಾದ ಮೆಗಾಟೆಕ್‌ ಕಂಪನಿಯ ಜಸ್ವಂತ ರೆಡ್ಡಿ, ರಂಜಿತಾ ರೆಡ್ಡಿ, ಅಶೋಕರೆಡ್ಡಿ, ನವೀನ್‌ ಡಿ.ಪಿ, ಗೀತಾ ನವೀನ್‌ ಮತ್ತಿತರರ ಜತೆಗೂಡಿ ಮಯ್ಯ ಅವರು ಬ್ಯಾಂಕಿಗೆ ದ್ರೋಹವೆಸಗಿದ್ದಾರೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್‌ ಕುಮಾರ್‌ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾದ ಅಧಿಕಾರಿಗಳು ನಡೆಸಿರುವ ಪರಿಶೀಲನೆ ಸಂದರ್ಭದಲ್ಲಿ ಮಯ್ಯ ಮತ್ತಿತರರು ನಡೆಸಿರುವ ವಂಚನೆ ಬಯಲಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.