ADVERTISEMENT

ಪಿಂಚಣಿದಾರರ ತ್ರೈವಾರ್ಷಿಕ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:38 IST
Last Updated 27 ಜನವರಿ 2023, 22:38 IST

ಬೆಂಗಳೂರು: ಅಖಿಲ ಭಾರತ ಪಿಂಚಣಿದಾರರು ಮತ್ತು ನಿವೃತ್ತರ ಮಹಾಸಂಘವು ತನ್ನ ನಾಲ್ಕನೇ ತ್ರೈವಾರ್ಷಿಕ ಸಮ್ಮೇಳನವನ್ನು
ಇದೇ ಶನಿವಾರ ಮತ್ತು ಭಾನುವಾರ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ವಿ.ಆಚಾರ್ಯ, ‘ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಲ್ಲ ಸಾರ್ವಜನಿಕ ವಲಯಗಳು, ಖಾಸಗಿ ವಲಯಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಅಂಗಸಂಸ್ಥೆಗಳನ್ನು ಪ್ರತಿನಿಧಿಸುವ 700ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧಿವೇಶನದಲ್ಲಿ 1,500 ಪಿಂಚಣಿದಾರರು ಮತ್ತು ನಿವೃತ್ತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಪಿಂಚಣಿ ಹೆಚ್ಚಳ ಮತ್ತು ಪರಿಷ್ಕರಣೆಯನ್ನು ಪಿಂಚಣಿ ನಿಯಮಗಳ ಅನುಸಾರ ಮಾಡಬೇಕು. ಸೇವೆಯಲ್ಲಿರುವ ನೌಕರರಿಗೆ ನಿಯಮಿತ ವೇತನ ಪರಿಷ್ಕರಣೆ ಆಗುತ್ತಲೆ ಇದ್ದರೂ, 1992ರಿಂದಲೂ ಬ್ಯಾಂಕ್ ಪಿಂಚಣಿದಾರರಿಗೆ ಅವರ
ಪಿಂಚಣಿ ಪರಿಷ್ಕರಣೆ ಆಗಿಲ್ಲ. ಪಿಂಚಣಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಿ, ಪರಿಹಾರೋಪಾಯಕ್ಕೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.