ಬೆಂಗಳೂರು: ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ನಡುವೆ ವೈಮನಸ್ಸು ಇದೆಯೇ?
ಮೇಯರ್ ಅವರು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲು ಹಾಗೂ ಪಾಲಿಕೆಯ ವಲಯ ಕಚೇರಿಗಳಿಗೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭಗಳಲ್ಲಿ ಉಪಮೇಯರ್ ಅವರು ಕಾಣಿಸಿಕೊಳ್ಳದಿರುವುದು ಇಂತಹದ್ದೊಂದು ಸಂದೇಹಕ್ಕೆಕಾರಣವಾಗಿದೆ.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಉಪಮೇಯರ್ ಭದ್ರೇಗೌಡ, 'ಹಾಗೇನೂ ಇಲ್ಲ. ಕೆಲವು ಕಾಮಗಾರಿ ವೀಕ್ಷಣೆಗೆ ತೆರಳುವಾಗ ಮೇಯರ್ ಜೊತೆಗೆ ನಾನು ಹೋಗಿಲ್ಲ ನಿಜ. ಸಂವಹನದ ಕೊರತೆಯಿಂದ ಈ ರೀತಿ ಆಗಿದೆ. ಮೈತ್ರಿಕೂಟದ ಎರಡೂ ಪಕ್ಷಗಳ ನಡುವೆ ಏನೇ ಅಸಮಾಧಾನಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ' ಎಂದರು.
'ಎರಡೂ ಪಕ್ಷಗಳ ಸದಸ್ಯರು ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಲಹೆ ನೀಡಿದ್ದಾರೆ. ನಮ್ಮ ಪಕ್ಷದವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕಂತೂ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.