ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇಲೆ ಆ ಪಕ್ಷದ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಬಿಜೆಪಿ ಕಾರ್ಯಕರ್ತರಾದ ಯಾಸ್ಮೀನ್ ಮತ್ತು ಸಲೀಂ ಎಂಬುವವರು ಮತದಾರರಿಗೆ ಹಣ ಹಂಚಿ, ಅವರಿಂದ ಮತದಾರರ ಗುರುತಿನ ಚೀಟಿಯನ್ನು ಬಲವಂತವಾಗಿ ಸಂಗ್ರಹಿಸಿದ್ದಾರೆ’ ಎಂದು ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಆರ್. ಸೋಮವಾರ ದೂರು ನೀಡಿದ್ದಾರೆ. ಯಶವಂತಪುರ ಠಾಣೆಯ ಪೊಲೀಸರು ಅಸಂಜ್ಞೇಯ (ಎನ್ಸಿ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಟೊ ರಿಕ್ಷಾವೊಂದರಲ್ಲಿ ಕುಳಿತು ಹಣ ಹಂಚುತ್ತಿದ್ದ ವ್ಯಕ್ತಿಯೊಬ್ಬರನ್ನು ಸುತ್ತುವರಿದು ಮಾಹಿತಿ ಪಡೆಯುತ್ತಿರುವ ವಿಡಿಯೊ ದೃಶ್ಯಾವಳಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಶೇಖರ್ ಎಂಬುವವರ ಸೂಚನೆಯಂತೆ ಬಿಜೆಪಿ ಪರವಾಗಿ ಹಣ ಹಂಚುತ್ತಿರುವುದಾಗಿ ಆ ವ್ಯಕ್ತಿ ಹೇಳಿರುವುದು ವಿಡಿಯೊದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.