ADVERTISEMENT

ಇಂಡಿಯಾ ಸಿಮೆಂಟ್ಸ್‌ನಿಂದ ಬೀಜದುಂಡೆ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:48 IST
Last Updated 6 ಆಗಸ್ಟ್ 2019, 19:48 IST

ಬೆಂಗಳೂರು:‘ಇಂಡಿಯಾ ಸಿಮೆಂಟ್ಸ್‌’ ಕಂಪನಿಯು ‘ಕೋರಮಂಡಲ್‌ ಕೇರ್ಸ್‌’ ಹೆಸರಿನಲ್ಲಿ ಹಸಿರು ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಬೀಜದುಂಡೆ ವಿತರಿಸಲು ಮುಂದಾಗಿದೆ. ಇದರ ಜೊತೆಗೆ, ಹೊಸದಾಗಿ ಮನೆ ನಿರ್ಮಿಸಿಕೊಳ್ಳುವ ತನ್ನ ಗ್ರಾಹಕರಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಕುರಿತು ತಜ್ಞರಿಂದ ಸಲಹೆ ಕೊಡಿಸಲು ಉದ್ದೇಶಿಸಿದೆ.

‘ಅಭಿಯಾನದ ಮೊದಲ ಹಂತವಾಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಬೀಜದುಂಡೆ ವಿತರಿಸಲಾಗುವುದು. ನಮ್ಮ ಗ್ರಾಹಕರು ಮತ್ತು ಸಾರ್ವಜನಿಕರು ಇಂಡಿಯಾ ಸಿಮೆಂಟ್ಸ್‌ನ ಮಳಿಗೆಗಳಲ್ಲಿ ಈ ಬೀಜದುಂಡೆಗಳನ್ನು ಪಡೆದುಕೊಳ್ಳಬಹುದು. ಈಗಾಗಲೇ ನಮ್ಮ ಡೀಲರ್‌ಗಳಿಗೆ ಇವುಗಳನ್ನು ಕಳುಹಿಸಲಾಗಿದೆ’ ಎಂದು ಕಂಪನಿಯ ವ್ಯಾಪಾರ ಮತ್ತು ಮಾರುಕಟ್ಟೆ ವಿಭಾಗದ ಬಿ. ರಮೇಶ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಲ ಸಂರಕ್ಷಣೆ ಕುರಿತು ನಾವು ಯೋಜನೆ ರೂಪಿಸಿದ್ದು, ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾದರೆ, ಅವರಿಗೆ ಜಲತಜ್ಞ ಎ.ಆರ್. ಶಿವಕುಮಾರ್‌ ಅವರಿಂದ ಸಲಹೆ ಕೊಡಿಸಲಾಗುವುದು’ ಎಂದರು.

ADVERTISEMENT

ಎ. ಆರ್. ಶಿವಕುಮಾರ್, ‘ತೋಟಗಾರಿಕೆ ತಜ್ಞರ ಸಲಹೆ ಪಡೆದು ಈ ಬೀಜದುಂಡೆಗಳನ್ನು ರೂಪಿಸಲಾಗಿದೆ. ಪ್ರಮುಖವಾಗಿ ನುಗ್ಗೆ ಹಾಗೂ ಬೇವಿನ ಬೀಜಗಳನ್ನು ವಿತರಿಸಲಾಗುತ್ತಿದೆ. ನುಗ್ಗೆ ಗಿಡ ಕಡಿಮೆ ಜಾಗದಲ್ಲಿ ನೇರವಾಗಿ ಬೆಳೆಯುತ್ತದೆ. ಬೇರುಗಳು ಸಣ್ಣದಾಗಿರುವುದರಿಂದ ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನುಗ್ಗೆ ಮರವೂ ಕೂಡ ಮಳೆ ನೀರು ಸಂಗ್ರಹಕದಂತೆ ಕೆಲಸ ಮಾಡುತ್ತದೆ’ ಎಂದರು.

‘ಕೋರಮಂಡಲ್‌ ಕೇರ್ಸ್‌’ ಕುರಿತು ಮಾಹಿತಿಗಾಗಿ, ಸಂಸ್ಥೆಯ ವೆಬ್‌ಸೈಟ್‌ www.coromandelcares.org ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.