ಯಲಹಂಕ: ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಕೋಗಿಲು ವೃತ್ತದ ಸಮೀಪದಲ್ಲಿ ಆಯೋಜಿಸಲಾಗಿದ್ದ ‘ಸಹಾಯ ಹಸ್ತ’ ಕಾರ್ಯಕ್ರಮಕ್ಕೆ ಕೆಪಿಸಿಸಿ ಉಪಾಧ್ಯ ಕ್ಷ ಬಿ.ಎಲ್. ಶಂಕರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕೋವಿಡ್ನಿಂದ ಮೃತಪಟ್ಟಿರುವವರ ಕುಟುಂಬಕ್ಕೆ ಕಾಂಗ್ರೆಸ್ನಿಂದ ಪರಿಹಾರವನ್ನು ಸಹಾಯ ಹಸ್ತ ಕಾರ್ಯಕ್ರಮದ ಮೂಲಕ ವಿತರಿಸಲಾಗುತ್ತಿದೆ. ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಮನೆಗಳಿಗೆ ತೆರಳಿ, ನೊಂದಿರುವ ಕುಟುಂಬಸದಸ್ಯರಿಗೆ ಸಾಂತ್ವನ ಹೇಳುವುದರ ಜೊತೆಗೆ ಸಾಧ್ಯವಾದಷ್ಟು ಪರಿಹಾರನೀಡುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯ ಸರ್ಕಾರ ನೀಡುವ ₹1 ಲಕ್ಷ ಪರಿಹಾರದ ಹಣವನ್ನು ಅವರಿಗೆ ತಲುಪುವಂತೆ ನೋಡಿಕೊಳ್ಳುವುದರ ಜೊತೆಗೆ ಕೇಂದ್ರ ಸರ್ಕಾರದ ₹4 ಲಕ್ಷ ಪರಿಹಾರ ನೀಡುವಂತೆ ಒತ್ತಡ ಹೇರುವ ಕೆಲಸ ಮಾಡಬೇಕು’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ‘ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ಗ್ರಾಮಗಳು ಹಾಗೂ ಬಿಬಿಎಂಪಿ ವಾರ್ಡ್ಗೆ ತೆರಳಿ, ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಸಮೀಕ್ಷೆ ಕಾರ್ಯ ನಡೆಸಿ, ಸರ್ಕಾರಕ್ಕೆ ವರದಿಯನ್ನು ತಲುಪಿಸಿ ಪರಿಹಾರ ಕೊಡಿಸಿದರೆ ನೊಂದ ಕುಟುಂಬಗಳಿಗೆ ಸಹಾಯ ಮಾಡಿದಂತಾಗುತ್ತದೆ’ ಎಂದು ತಿಳಿಸಿದರು.
ಶಾಸಕ ಕೃಷ್ಣಬೈರೇಗೌಡ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಎಂ.ಎನ್. ಗೋಪಾಲಕೃಷ್ಣ, ಚೊಕ್ಕನಹಳ್ಳಿ ವೆಂಕಟೇಶ್, ಕೇಶವ ರಾಜಣ್ಣ, ಲಾವಣ್ಯ ನರಸಿಂಹಮೂರ್ತಿ, ಪದ್ಮಾವತಿ ಅಮರನಾಥ್, ವೈ.ಆರ್.ಶ್ರೀಧರ್, ಎಸ್.ಬಿ. ಬಾಷಾ, ಎ.ಎನ್. ಸಂತೋಷ್ ಕುಮಾರ್, ವಿ.ಜಿ.ಜಯರಾಮಯ್ಯ, ಎನ್.ಎಂ.ಶ್ರೀನಿವಾಸ್, ಎನ್.ತಿಮ್ಮರಾಜು, ಎಸ್. ಸುರೇಶ್ ಮೃತ್ಯುಂಜಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.