ADVERTISEMENT

ಸಾಲಗಾರರ ಕಾಟ; ದಂಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 22:59 IST
Last Updated 20 ಮಾರ್ಚ್ 2020, 22:59 IST
   

ಬೆಂಗಳೂರು: ‘ಸಾಲಗಾರರ ಕಾಟದಿಂದ ಬೇಸತ್ತಿದ್ದರು’ ಎನ್ನಲಾದ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ‘ಹೊಸಹಳ್ಳಿ ನಿವಾಸಿಧರ್ಮರಾಜ್ (55) ಹಾಗೂ ಅವರ ಪತ್ನಿ ಭಾಗ್ಯಮ್ಮ (50) ಆತ್ಮಹತ್ಯೆ ಮಾಡಿಕೊಂಡವರು.

‘ನಮಗೆ ಸಾಲ ಕೊಟ್ಟಿದ್ದವರು ಅದನ್ನು ವಾಪಸು ನೀಡುವಂತೆ ನಿತ್ಯವೂ ಪೀಡಿಸುತ್ತಿದ್ದಾರೆ. ಜೀವ ಬೆದರಿಕೆ ಸಹ ಹಾಕುತ್ತಿದ್ದಾರೆ. ಅವರ ಕಿರುಕುಳವೇ ನಮ್ಮ ಸಾವಿಗೆ ಕಾರಣ’ ಎಂದು ದಂಪತಿ ಬರೆದಿದ್ದಾರೆ ಎನ್ನಲಾದ ಮರಣಪತ್ರ ಮನೆಯಲ್ಲಿ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.

‘‍ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ಧರ್ಮರಾಜ್ ದಂಪತಿ ವಾಸವಿದ್ದರು. ಧರ್ಮರಾಜ್ ಅವರು ನಗರದ ಮೂರು ಕಡೆ ಬೇಕರಿಗಳನ್ನು ನಡೆಸುತ್ತಿದ್ದರು. ಮಗ ಸಹ ಬೇಕರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.’

ADVERTISEMENT

‘ಶಾಲೆಗೆ ರಜೆ ಇದ್ದಿದ್ದರಿಂದ ಸೊಸೆ ಮತ್ತು ಮೊಮ್ಮಕ್ಕಳು ಇತ್ತೀಚೆಗೆ ಊರಿಗೆ ಹೋಗಿದ್ದಾರೆ. ಗುರುವಾರ ಮಗ ಸಹ ಬೇಕರಿಗೆ ಹೋಗಿದ್ದರು.
ಇದೇ ವೇಳೆ ದಂಪತಿ ಮಾತ್ರ ಮನೆಯಲ್ಲಿದ್ದರು. ರಾತ್ರಿ ಮನೆಯ ಕೊಠಡಿಯಲ್ಲೇ ದಂಪತಿ ನೇಣು ಹಾಕಿಕೊಂಡಿದ್ದರು. ರಾತ್ರಿ 12.30ರ ಸುಮಾರಿಗೆ ಮಗ ಮನೆಗೆ ಬಂದಾಗಲೇ ವಿಷಯ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಕೋಟ್ಯಂತರ ರೂಪಾಯಿ ಸಾಲ: ‘ಧರ್ಮರಾಜ್ ಅವರು ₹ 2 ಕೋಟಿಗೂ ಹೆಚ್ಚು ಸಾಲ ಮಾಡಿರುವ ಮಾಹಿತಿ ಇದೆ. ಅದರಲ್ಲಿ ಸ್ವಲ್ಪ ಹಣವನ್ನು
ಅವರು ತೀರಿಸಿದ್ದರು. ಅಷ್ಟಾದರೂ ಸಾಲಗಾರರು ಹಣ ನೀಡುವಂತೆ ಪೀಡಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.