ADVERTISEMENT

ಕೋವಿಡ್‌-–19: ಸಂಭಾವ್ಯ ಅಲೆ ಎದುರಿಸಲು ಸಜ್ಜಾಗಿ

ಕೋವಿಡ್ ತಜ್ಞರ ಸಮಿತಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 19:46 IST
Last Updated 2 ಫೆಬ್ರುವರಿ 2022, 19:46 IST
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಶಾಸಕ ಎಂ.ಕೃಷ್ಣಪ್ಪ ಪರಿಹಾರದ ಚೆಕ್‌ ವಿತರಿಸಿದರು. ತಹಶೀಲ್ದಾರ್ ಪಿ.ದಿನೇಶ್, ಬಿಜೆಪಿ ಮುಖಂಡರಾದ ಕೋಣನಕುಂಟೆ ಜಯರಾಮ್, ರಾಜಶೇಖರ್ ರೆಡ್ಡಿ,ಟಿ.ನಾರಾಯಣ್ ಹಾಗೂ ಇತರರು ಇದ್ದಾರೆ.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಶಾಸಕ ಎಂ.ಕೃಷ್ಣಪ್ಪ ಪರಿಹಾರದ ಚೆಕ್‌ ವಿತರಿಸಿದರು. ತಹಶೀಲ್ದಾರ್ ಪಿ.ದಿನೇಶ್, ಬಿಜೆಪಿ ಮುಖಂಡರಾದ ಕೋಣನಕುಂಟೆ ಜಯರಾಮ್, ರಾಜಶೇಖರ್ ರೆಡ್ಡಿ,ಟಿ.ನಾರಾಯಣ್ ಹಾಗೂ ಇತರರು ಇದ್ದಾರೆ.   

ಬೆಂಗಳೂರು: ‘ನಗರದಲ್ಲಿ ಕೊರೋನಾ ಮೂರನೇ ಅಲೆಯನ್ನು ಎಲ್ಲರ ಸಹಾಯದಿಂದ ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆಯೂ ತಗ್ಗುತ್ತಿದೆ. ಭವಿಷ್ಯದಲ್ಲಿ ಹೊಸ ಅಲೆ ಕಾಣಿಸಿಕೊಂಡರೂ ಅದನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿರಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಬಿಬಿಎಂಪಿಯ ಕೋವಿಡ್ ತಜ್ಞರ ಸಮಿತಿ ಜೊತೆ ವರ್ಚುವಲ್ ರೂಪದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕಿತರಿಗೆ ಯಾವ ತರಹದ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ನಿರ್ಧರಿಸುವ ಸಂಚಾರ ಟ್ರಯಾಜ್ ಘಟಕ ಮತ್ತು ಟೆಲಿ ಟ್ರಯಾಜ್ ಘಟಕಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ವೈದ್ಯರು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡಗಳ ನೆರವಿನಿಂದ ನಿತ್ಯವೂ 3,000ಕ್ಕೂ ಹೆಚ್ಚು ಸೋಂಕಿತರಿಗೆ ಅವರ ಮನೆಯಲ್ಲೇ ಟ್ರಯಾಜ್ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಸೂಚನೆ ಸಿಗುತ್ತಿದ್ದಂತೆಯೇ ಜನರಲ್ಲಿ ಈ ಕುರಿತ ಭಯವನ್ನು ಹೋಗಲಾಡಿಸಿ, ಧೈರ್ಯ ತುಂಬುವ ಕಾರ್ಯಕ್ಕೆ ಮಹತ್ವ ನೀಡಿದೆವು. ಪರಿಸ್ಥಿತಿಯನ್ನು ಎದುರಿಸುವುದರ ಜೊತೆಗೆ ಲಸಿಕಾಕರಣಕ್ಕೂ ಆದ್ಯತೆ ನೀಡಿದ್ದೇವೆ.ಇದರ ಪರಿಣಾಮವಾಗಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕಡಿಮೆಯಿದೆ. ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣದಲ್ಲೂ ಗುರಿ ತಲುಪಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜನವರಿ ತಿಂಗಳಲ್ಲಿ ಕೋವಿಡ್ ಸೊಂಕಿತರಲ್ಲಿ ಕೇವಲ ಶೇ 1.8ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನವರು 60 ವರ್ಷ ಮೇಲಿನವರು. ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂಚರನೆಯ ವಿಶ್ಲೇಷಣೆಗೆ (ಜೀನೋಮಿಕ್ ಸೀಕ್ವೆನ್ಸಿಂಗ್) ಕಳುಹಿಸಲಾಗುತ್ತಿದ್ದು, ಹೆಚ್ಚಿನ ಮೇಲ್ವಿಚಾರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆ.ವಿ.ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ಬಾಲಸುಂದರ್, ಕೋವಿಡ್ ತಜ್ಞರ ಸಮಿತಿ ಸದಸ್ಯರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.