ಬೆಂಗಳೂರು:‘ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ₹10 ಸಾವಿರ ಆರ್ಥಿಕ ನೆರವು ನೀಡಬೇಕು’ ಎಂದು ಮೂಲನಿವಾಸಿ ಮಹಾ ಒಕ್ಕೂಟದ ಅಧ್ಯಕ್ಷ ಜಿಗಣಿ ಶಂಕರ್ ಒತ್ತಾಯಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್ಲರಿಗೂ ತಲಾ 10 ಕೆ.ಜಿ. ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ವಿತರಿಸಬೇಕು. ನಿರುದ್ಯೋಗಿ ವಲಸಿಗರಿಗೆ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆಯಡಿ ಕನಿಷ್ಠ ಕೂಲಿ ಮತ್ತು ಕೆಲಸದ ದಿನಗಳನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ‘ಕರ ನಿರಾಕರಣ ಚಳವಳಿ’ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಕಾರ್ಮಿಕರು, ಕುಶಲಕರ್ಮಿಗಳು, ಟ್ಯಾಕ್ಸಿ–ರಿಕ್ಷಾ ಚಾಲಕರು ಸೇರದಂತೆ ಎಲ್ಲ ದುಡಿಯುವ ವರ್ಗಕ್ಕೆ ನೆರವು ನೀಡಬೇಕು. ಸಣ್ಣ ಹಾಗೂ ಗೃಹ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ವಿದ್ಯುತ್, ಗ್ಯಾಸ್ ಹಾಗೂ ನೀರಿನ ಬಿಲ್ ಮತ್ತು ಸಾಲದ ಮೂರು ತಿಂಗಳ ಕಂತನ್ನು ಮನ್ನಾ ಮಾಡಬೇಕು’ ಎಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಭೀಮಪುತ್ರಿ ರೇವತಿ ರಾಜ್,‘ರಾಜ್ಯದಲ್ಲಿನ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೇ ಮೀಸಲಿಡಬೇಕು. ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟಕ್ಕೆ ತಡೆ ನೀಡಬೇಕು ಹಾಗೂ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಆಗ್ರಹಿಸಿದರು.
‘ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು , ಆಂಬುಲೆನ್ಸ್ ಚಾಲಕರು, ಸ್ಮಶಾನ ಕಾರ್ಮಿಕರು ಸೇರಿದಂತೆ ಕೊರೊನಾ ಸೇವೆಯಲ್ಲಿ ನಿರತರಾಗಿರುವವರು ಸೋಂಕಿನಿಂದ ಮೃತಪಟ್ಟರೆ, ₹50 ಲಕ್ಷ ಪರಿಹಾರ ಒದಗಿಸಬೇಕು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.