ಬೆಂಗಳೂರು: ನಿಷೇಧಿತ ಛಾಪಾ ಕಾಗದ ಮುದ್ರಿಸಿ ಮಾರುತ್ತಿದ್ದ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿದೆ.
‘ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನ ಬಳಿಯ ಮಳಿಗೆಗಳಲ್ಲಿ ನಕಲಿ ಛಾಪಾ ಕಾಗದ ಮಾರಲಾಗುತ್ತಿತ್ತು. ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಜಾಲ ಭೇದಿಸಲಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಶ್ರೀನಗರ ಎಸ್ಬಿಎಂ ಕಾಲೊನಿ ನಿವಾಸಿ ವಿಶ್ವನಾಥ್ (57), ಕಾರ್ತಿಕ್ (29), ವೆಂಕಟೇಶ್ (54) ಹಾಗೂ ಶಾಮರಾಜ್ (48) ಸೇರಿ 11 ಮಂದಿಯನ್ನು ಇದುವರೆಗೂ ಬಂಧಿಸ ಲಾಗಿದೆ. ಇವರಿಂದ ₹ 1.33 ಕೋಟಿ ಮೊತ್ತದ 2,264 ನಕಲಿ ಛಾಪಾ ಕಾಗದ ಜಪ್ತಿ ಮಾಡಲಾಗಿದೆ’ ಎಂದರು.
‘ಟೈಪಿಂಗ್ ಕೆಲಸ ಹಾಗೂ ಅರ್ಜಿ ನಮೂನೆಗಳ ಮಾರಾಟಕ್ಕೆಂದು ಮಳಿಗೆ ಪಡೆದಿದ್ದ ಆರೋಪಿಗಳು, ನಿಷೇಧಿತ ಛಾಪಾ ಕಾಗದಗಳನ್ನು ಅಕ್ರಮವಾಗಿ ಮುದ್ರಿಸಿ ಮಾರುತ್ತಿದ್ದರು. ಸರ್ಕಾರದ ಕಂದಾಯ ಇಲಾಖೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಲು, ಸಾರ್ವಜನಿಕರ ಆಸ್ತಿ ಕಬಳಿಸಲು, ಸುಳ್ಳು ದಾವೆ ಹೂಡಲು ಈ ಛಾಪಾ ಕಾಗದಗಳು ಬಳಕೆಯಾಗುತ್ತಿದ್ದ ಮಾಹಿತಿ ಇದೆ‘ ಎಂದೂ ಹೇಳಿದರು.
‘1990, 1995, 2002 ಹಾಗೂ 2009ನೇ ವರ್ಷದ ನಿವೇಶನಗಳ ನಕಲಿ ಜಿಪಿಎ ಪತ್ರಗಳು ಆರೋಪಿಗಳ ಬಳಿ ಸಿಕ್ಕಿವೆ. ಕಂಪ್ಯೂಟರ್, ಸರ್ಕಾರದ ವಿವಿಧ ಇಲಾಖೆ ಮುದ್ರೆಗಳು, 119 ನಕಲಿ ಸೀಲ್ಗಳು, ಹಾರ್ಡ್ಡಿಸ್ಕ್ ಸಹ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಳಿ ಕಾಗದ ಖರೀದಿಸಿದ್ದ ಗ್ರಾಹಕರು, ಆಸ್ತಿ ಕಬಳಿಕೆ ಮಾಡಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.