ADVERTISEMENT

ದರೋಡೆ; ಅಣ್ಣ–ತಮ್ಮ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:57 IST
Last Updated 1 ಜುಲೈ 2021, 21:57 IST

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಕೈ–ಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದ ಆರೋಪದಡಿ ಅಣ್ಣ–ತಮ್ಮನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಿಂಡ್ಲು ಮುಖ್ಯರಸ್ತೆಯ ಬಸವಸಮಿತಿ ಲೇಔಟ್ ನಿವಾಸಿ ಅರವಿಂದ್ (30) ಹಾಗೂ ಬಸವನಗುಡಿ ಬಿ.ಪಿ. ವಾಡಿಯಾ ರಸ್ತೆಯ ನಿವಾಸಿ ಅವಿನಾಶ್ (34) ಬಂಧಿತರು. ಅವರಿಂದ 123.77 ಗ್ರಾಂ ತೂಕದ ಚಿನ್ನಾಭರಣ, 3 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ₹40 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸುಭಾಷ್ ಎಂಬುವರು ಪತ್ನಿ ಜಯಶ್ರೀ ಜೊತೆ ಬಸವ ಸಮಿತಿ ಲೇಔಟ್‌ನ ಮನೆಯಲ್ಲಿ ವಾಸವಿದ್ದರು. ಅವರಿಗೆ ಸೇರಿದ್ದ ಮನೆಯಲ್ಲೇ ಬಾಡಿಗೆಗೆ ಇದ್ದ ಆರೋಪಿ ಅರವಿಂದ್ ಕೃತ್ಯ ಎಸಗಿದ್ದ’ ಎಂದೂ ತಿಳಿಸಿದರು.

ADVERTISEMENT

ಬಟ್ಟೆ ವ್ಯಾಪಾರದಲ್ಲಿ ನಷ್ಟ: ‘ಆರೋಪಿ, ಸಾಲ ಮಾಡಿ ಬಟ್ಟೆ ವ್ಯಾಪಾರ ಆರಂಭಿಸಿದ್ದ. ಅದರಲ್ಲಿ ನಷ್ಟ ಅನುಭವಿಸಿದ್ದ ಕಾರಣಕ್ಕೆ ಕೃತ್ಯಕ್ಕೆ ಸಂಚು ರೂಪಿಸಿದ್ದ’ ಎಂದಿದ್ದಾರೆ.

ಕೃತ್ಯ ನಡೆದ ದಿನ ಪೊಲೀಸರ ತಂಡ ಮನೆಗೆ ಹೋದಾಗಲೂ ಆರೋಪಿ ಸ್ಥಳದಲ್ಲಿದ್ದ. ತನಗೇನು ಗೊತ್ತಿಲ್ಲದಂತೆ ನಟಿಸಿದ್ದ. ಆರೋಪಿಗಳು ಜಯಶ್ರೀ ಅವರನ್ನು ಹಿಂದಿನಿಂದ ಹಿಡಿದುಕೊಂಡು ಕಟ್ಟಿಹಾಕಿದ್ದರು. ಅವರೂ ಆರೋಪಿಗಳನ್ನು ನೋಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.