ADVERTISEMENT

ಬೆಂಗಳೂರು | ಕಾವೇರಿ 2.0 ಸಾಫ್ಟ್​ವೇರ್ ಹ್ಯಾಕ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 23:30 IST
Last Updated 8 ಫೆಬ್ರುವರಿ 2025, 23:30 IST
   

ಬೆಂಗಳೂರು: ಆಸ್ತಿ ಖರೀದಿ, ಮಾರಾಟ ಸೇರಿ ನೋಂದಣಿ ಪ್ರಕ್ರಿಯೆಗೆ ಬಳಸುವ ಕಾವೇರಿ 2.0 ತಂತ್ರಾಂಶವನ್ನು ಅಪರಿಚಿತರು ಹ್ಯಾಕ್ ಮಾಡಿರುವ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ (ಐಜಿಆರ್‌) ಕೆ.ಎ.ದಯಾನಂದ್‌ ದೂರು ನೀಡಿದ್ದಾರೆ.

ಈ ಸಂಬಂಧ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಸರ್ವರ್ ಸಮಸ್ಯೆಯಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿತ್ತು. ಐಜಿಆರ್ ಅವರು ಪರಿಶೀಲಿಸಿದಾಗ ಅಪರಿಚಿತರು ಕಾವೇರಿ 2.0 ಸಾಫ್ಟ್​​ವೇರ್ ಅನ್ನು ಹ್ಯಾಕ್ ಮಾಡಿ, ವೆಬ್‌ಸೈಟ್ ಪ್ರವೇಶಿಸಿ ಅದರಲ್ಲಿರುವ ದತ್ತಾಂಶಗಳನ್ನು ಕಳವು ಮಾಡಲು ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ.

ADVERTISEMENT

ಈ ರೀತಿಯ 62 ಇ-ಮೇಲ್ ಖಾತೆಗಳು ಹಾಗೂ ಅವುಗಳ ಐಪಿ ವಿಳಾಸಗಳ ಪಟ್ಟಿಯನ್ನು ಸ್ಮಾರ್ಟ್ ಗವರ್ನೆನ್ಸ್‌ ಸೆಂಟರ್ (ಸಿಎಸ್‌ಜಿ) ನೀಡಿದೆ.

ಸೈಬರ್​​ ದಾಳಿಕೋರರು ಹ್ಯಾಕ್ ಮಾಡಿದ ಕಾರಣ, ಕಾವೇರಿ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆ ಜನವರಿಯಲ್ಲಿ ಉಂಟಾಗಿತ್ತು.‌

ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ (ಇ.ಸಿ), ಸರ್ಟಿಫಿಕೇಟ್‌ ಕಾಪಿ (ಸಿ.ಸಿ) ಮತ್ತು ಇತರ ಸೇವೆಗಳನ್ನು ಉಪ ನೋಂದಣಿ ಕಚೇರಿ ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.