ADVERTISEMENT

ಪೊಲೀಸರ ಎದುರು ಹಾಜರಾದ ರೌಡಿ ಸೈಕಲ್‌ ರವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:03 IST
Last Updated 15 ಮಾರ್ಚ್ 2021, 19:03 IST
ಸೈಕಲ್‌ ರವಿ
ಸೈಕಲ್‌ ರವಿ   

ಬೆಂಗಳೂರು: ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ರವಿಕುಮಾರ್ ಅಲಿಯಾಸ್ ಸೈಕಲ್ ರವಿ ತನ್ನ ವಕೀಲರ ಮೂಲಕ ವಿ.ವಿ.ಪುರ ಠಾಣೆ ಪೊಲೀಸರ ಎದುರು ಸೋಮವಾರ ಹಾಜರಾದ.

ಕೊಲೆ, ಕೊಲೆ ಯತ್ನ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರವಿ ಹೆಸರು ಬನಶಂಕರಿ ಠಾಣೆ ರೌಡಿಪಟ್ಟಿಯಲ್ಲಿದೆ. ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ ಸೈಕಲ್ ರವಿ, ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ. ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಮಾಡುತ್ತಿದ್ದ ಬಗ್ಗೆಯೂ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದವು.

ಫೈನಾನ್ಶಿಯರ್‌ ಅವಿನಾಶ್‌ ಹಾಗೂ ರೌಡಿ ಲಿಂಗ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿ ರವಿಯನ್ನು ಕಾಲಿಗೆ ಗುಂಡು ಹಾರಿಸಿ 2018ರಲ್ಲಿ ಸೆರೆ ಹಿಡಿಯಲಾಗಿತ್ತು. ಕೆಲದಿನ ಆಸ್ಪತ್ರೆ ಹಾಗೂ ಜೈಲಿನಲ್ಲಿದ್ದ ಆತ, ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ. ಆತನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಎದುರಾಳಿ ತಂಡದವರನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು.

ADVERTISEMENT

‘ಠಾಣೆಗೆ ಹಾಜರಾಗಿ, ಶರಣಾಗಲು ವಕೀಲರ ಸಮೇತ ಬಂದಿರುವುದಾಗಿ ಸೈಕಲ್ ರವಿ ಹೇಳುತ್ತಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.