ದಾಬಸ್ಪೇಟೆ: ಸುಣ್ಣ–ಬಣ್ಣ, ಹಸಿರು ಚಪ್ಪರ, ತಳಿರು ತೋರಣಗಳಿಂದ ಅಲಂಕೃತಗೊಂಡ ಬಸವೇಶ್ವರ, ಚೆನ್ನಿಗರಾಯ ಮತ್ತು ಮಾರಮ್ಮ ದೇವಾಲಯಗಳು. ಮನೆಗಳ ಮುಂದೆ ಚೆಂದದ ರಂಗೋಲಿ. ಅಲಂಕಾರ ಮಾಡಿಕೊಂಡ ಹೆಂಗಳೆಯರು.
ಇದು ಕಂಡು ಬಂದದ್ದು ನೆಲಮಂಗಲ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಚೆನ್ನಿಗರಾಯ ಮತ್ತು ಮಾರಮ್ಮ ಜಾತ್ರಾ ಮಹೋತ್ಸವದಲ್ಲಿ.
ಜಾತ್ರೆ ಹಾಗೂ ರಥೋತ್ಸವ ಸೋಮವಾರದಂದು ನಡೆಯಿತು. ನೆರೆಹೊರೆಯ ಗ್ರಾಮಗಳ ಜನರು ಜಾತ್ರೆಗೆ ಆಗಮಿಸಿದ್ದರು.
ಪೂಜಾ–ಕೈಂಕರ್ಯಗಳು ನಡೆದು, ಹೂಗಳಿಂದ ಅಲಂಕೃತಗೊಂಡ ಬಸವೇಶ್ವರ ಉತ್ಸವ ಮೂರ್ತಿಯನ್ನು ಸಿಂಗಾರಗೊಂಡಿದ್ದ ರಥದಲ್ಲಿ ಕೂರಿಸಲಾಯಿತು. ವೇದಘೋಷ ಹಾಗೂ ಭಕ್ತರ ಉದ್ಗಾರದ ನಡುವೆ ರಥವನ್ನು ಎಳೆಯಲಾಯಿತು.
ಭಕ್ತರು ದವನ ಚುಚ್ಚಿದ ಬಾಳೆಹಣ್ಣು ಎಸೆದರು. ರಥಕ್ಕೆ ಪೂಜೆ ಮಾಡಿಸಿದರು. ಮಜ್ಜಿಗೆ, ಪಾನಕ, ಹೆಸರುಬೇಳೆ ಹಾಗೂ ಪ್ರಸಾದ ಹಂಚಲಾಯಿತು.
ಮಂಗಳವಾರದಂದು ಚೆನ್ನಿಗರಾಯ ಹಾಗೂ ಮಾರಮ್ಮರಿಗೆ ಉಪಹಾರ, ತಂಬಿಟ್ಟಿನ ಆರತಿ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.