ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ಕಲಾವಿದರಾದ ಉದಯ್ ಕೃಷ್ಣ ಜಿ ಮತ್ತು ಅವರ ಪುತ್ರಿ ನಿಯತಿ ಯು. ಭಟ್ ಅವರ ಛಾಯಾಚಿತ್ರಗಳು ಮತ್ತು ಕಲಾಕೃತಿಗಳ ಪ್ರದರ್ಶನ ‘ಡ್ಯಾಪರ್ ಶೋ’ಗೆ ಶನಿವಾರ ಚಾಲನೆ ನೀಡಲಾಯಿತು.
‘ಡ್ಯಾಪರ್ ಶೋ’ ಮೂರು ಪೀಳಿಗೆಗಳ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಉದಯ್ ಕೃಷ್ಣ, ಅವರ ಪುತ್ರಿ ನಿಯತಿ ಹಾಗೂ ಉದಯ್ ಕೃಷ್ಣ ಅವರ ತಾಯಿ ಜಿ.ಎಸ್. ಶಂಕರಿ ಅವರ ಕಲೆಗಳನ್ನು ಪ್ರದರ್ಶಿಸಲಾಯಿತು.
ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ಉದಯ್ ಕೃಷ್ಣ ಮತ್ತು ನಿಯತಿ ಅವರು ರಚಿಸಿರುವ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ಚಂದ್ರ ಬೋಸ್, ಕುವೆಂಪು, ದ.ರಾ. ಬೇಂದ್ರೆ, ಶಿವರಾಂ ಕಾರಂತ, ಅಟಲ್ ಬಿಹಾರಿ ವಾಜಪೇಯಿ, ಲತಾ ಮಂಗೇಷ್ಕರ್, ಪುನೀತ್ ರಾಜ್ಕುಮಾರ್, ಅಮಿತಾಭ್ ಬಚ್ಚನ್, ರೋಜರ್ ಫೆಡರರ್, ಕಪಿಲ್ ದೇವ್, ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರ ಕಲಾಕೃತಿಗಳು ಕಲಾಪ್ರೇಮಿಗಳ ಕೈಬೀಸಿ ಕರೆಯುತ್ತಿವೆ. ಮತ್ತೊಂದಡೆ ವೈವಿಧ್ಯಮಯ ಛಾಯಾಚಿತ್ರಗಳು ಹಾಗೂ ವನ್ಯಜೀವಿಗಳ ಛಾಯಾಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.
ದಾಸವಾಣಿ ಗಾಯಕ ವಿದ್ಯಾಭೂಷಣ, ‘ಮಕ್ಕಳು ಪಠ್ಯದ ಜೊತೆಗೆ ಪಠ್ಯತೇರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಪ್ರೋತ್ಸಾಹಿಸಬೇಕು. ನಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಸಾಧನೆ ಮಾಡಿದರೆ, ಜೀವನದಲ್ಲಿ ಸಂತೋಷ, ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಾಗುತ್ತದೆ’ ಎಂದು ಹೇಳಿದರು.
‘ಡ್ಯಾಪರ್ ಶೋ’ ಪ್ರದರ್ಶನ ಇದೇ 28ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿ.ಎಸ್. ಶಂಕರಿ, ನಿಯತಿ, ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.