ಬೆಂಗಳೂರು: ನಟ ದರ್ಶನ್ ಅವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಪ್ರಕರಣ ಸಂಬಂಧ, ಅವರ ವ್ಯವಸ್ಥಾಪಕ ಶ್ರೀನಿವಾಸ್ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
‘ಸುಮಾರು 15 ವರ್ಷಗಳಿಂದ ದರ್ಶನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಾ. 19ರಂದು ‘ಒಡೆಯ’ ಸಿನಿಮಾ ಶೂಟಿಂಗ್ಗಾಗಿ ದರ್ಶನ್ ಹೈದರಾಬಾದ್ನಲ್ಲಿ ಇದ್ದರು. ಮಾರ್ಚ್ 20ಕ್ಕೆ ಮಂಡ್ಯಕ್ಕೆ ಬಂದು ಹೈದರಾಬಾದ್ಗೆ ವಾಪಸು ಹೋಗಿದ್ದರು’ ಎಂದು ದೂರಿನಲ್ಲಿ ಶ್ರೀನಿವಾಸ್ ಹೇಳಿದ್ದಾರೆ.
‘ದರ್ಶನ್ ಅವರು ಶೂಟಿಂಗ್ಗೆ ಹೊರಗೆ ಹೋಗಿದ್ದ ಸಮಯದಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾದ ಕೆಂಪೇಗೌಡ ಹಾಗೂ ಪವನ್ ಅವರೇ ಮನೆ ನೋಡಿಕೊಳ್ಳುತ್ತಿದ್ದರು. ಮಾ. 22ರ ರಾತ್ರಿ 12.54ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ, ಮನೆ ಮೇಲೆ ಕಲ್ಲು ತೂರಿದ್ದು, ಕಿಟಕಿಯ ಗಾಜು ಒಡೆದಿದೆ. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿಮನೆಯ ಮುಂದೆ ಹಾಕಿದ್ದ ಬ್ಯಾನರ್ ಅನ್ನು ಕೂಡಾ ಹರಿದು ಹಾಕಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ, ಹೊರ ಬಂದಾಗ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದಾನೆ. ಆರೋಪಿಯನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.