ಹೆಸರಘಟ್ಟ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಾಣಾವರ ಹಾಗೂ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ₹23 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಆರ್.ಮಂಜುನಾಥ್ ಮಂಗಳವಾರ ಚಾಲನೆ ನೀಡಿದರು.
ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಕಚೇರಿ ಹತ್ತಿರದ ರಾಜಕಾಲುವೆಗೆ 25 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಸುಮಾರು ₹18 ಲಕ್ಷ ವೆಚ್ಚದಲ್ಲಿ ದಾಸನಪ್ಪನ ಪಾಳ್ಯದಿಂದ ಸಂಧ್ಯಾನಗರಕ್ಕೆ ಕಾಂಕ್ರೀಟ್ ರಸ್ತೆ, ರೈಲ್ವೆ ಅಂಡರ್ಪಾಸ್ ನಿಂದ ಕೃಷ್ಣ ಕಾಲೇಜು ಕಡೆ ಸಾಗುವ ರಸ್ತೆಯನ್ನು ₹35 ಲಕ್ಷದಲ್ಲಿ, ಗಣಪತಿ ನಗರ, ತಮ್ಮೆನಹಳ್ಳಿ, ಶಾಂತಿನಗರ, ಲಕ್ಷ್ಮೀಪುರ, ಕೆಂಪಾಪುರ ಗ್ರಾಮಗಳ ಮುಖ್ಯರಸ್ತೆ ಮತ್ತು ಚರಂಡಿಯನ್ನು ₹10 ಕೋಟಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಚಿಕ್ಕಬಾಣಾವರ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯ ಮಹಿಳೆಯರು ಒತ್ತಾಯಿಸಿದರು. ‘ಕೆರೆಯು ಸಂಪೂರ್ಣವಾಗಿ ಕಲಷಿತಗೊಂಡಿದೆ. ಕೆರೆಯಿಂದ ಗಬ್ಬುವಾಸನೆ ಬರುತ್ತಿದ್ದು, ಗ್ರಾಮಸ್ಥರು ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕೆರೆಯ ಅಸುಪಾಸಿನಲ್ಲಿ ವಾಸ ಮಾಡುತ್ತಿರುವ ಜನರು ಗಬ್ಬುವಾಸನೆಗೆ ತತ್ತರಿಸಿ ಹೋಗಿದ್ದಾರೆ. ಕೆರೆಯನ್ನು ಅಭಿವೃದ್ಧಿಪಡಿಸಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಮ್ಮ ಅವರು ಶಾಸಕರಲ್ಲಿ ಮನವಿ
ಮಾಡಿದರು.
ಆರ್.ಮಂಜುನಾಥ್ ಪ್ರತಿಕ್ರಿಯಿಸಿ, ‘ಎರಡು ದಿನಗಳಲ್ಲಿ ಬಿಡಿಎ ಆಯುಕ್ತರನ್ನು ಕರೆಸಿ ಸಮಸ್ಯೆಯನ್ನು ಮನದಟ್ಟು ಮಾಡಿಕೊಡೋಣ. ಕೆರೆ ಅಭಿವೃದ್ಧಿಗೆ ₹43 ಕೋಟಿ ಅನುದಾನ ನೀಡುವುದಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮರಿಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವ ಮೂರ್ತಿ ಮತ್ತು ಚಿಕ್ಕಬಾಣಾವರ ಜೆಡಿಎಸ್ ಮುಖಂಡ ಬಿ.ಸಿ. ಗೋವಿಂದರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.