ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬೆಂಗಳೂರಿನ ‘ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ನ (ಸಿಎಸ್ಐಟಿಎ)’ ಖಾತೆಯಲ್ಲಿದ್ದ ₹59.29 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ರಕ್ಷಣಾ ಇಲಾಖೆಯು ತನಗೆ ಭೋಗ್ಯಕ್ಕೆ ನೀಡಿದ್ದ ಜಾಗವನ್ನು, ಸಿಎಸ್ಐಟಿಯು ಕಾನೂನುಬಾಹಿರವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ಹಸ್ತಾಂತರಿಸಿದ ಪ್ರಕರಣದಲ್ಲಿ ಇ.ಡಿ. ಈ ಕ್ರಮ ತೆಗೆದುಕೊಂಡಿದೆ.
ನಗರದ ಹೊಸೂರು ರಸ್ತೆಯ ವೆಲ್ಲಾರ ವೃತ್ತದ ಬಳಿ ಇರುವ ಆಲ್ಸೇಂಟ್ ಚರ್ಚ್ಗೆ ಹೊಂದಿಕೊಂಡಿ ರುವ 7,426.8 ಚದರ ಮೀಟರ್ ಜಾಗವನ್ನು ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲು ಚರ್ಚ್ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ₹ 59.29 ಕೋಟಿ ಮೊತ್ತದ ಪರಿಹಾರವನ್ನು ಬಿಎಂಆರ್ಸಿಎಲ್, ಚರ್ಚ್ಗೆ ನೀಡಿತ್ತು. ಇದು ರಕ್ಷಣಾ ಸಚಿವಾಲಯಕ್ಕೆ ಸೇರಿದ ಜಾಗ. ಇದನ್ನು ಅಕ್ರಮವಾಗಿ ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲಾಗಿದೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
‘ದೂರಿನ ಅನ್ವಯ ತನಿಖೆ ನಡೆಸಿದಾಗ ಈ ಜಾಗವನ್ನು ರಕ್ಷಣಾ ಇಲಾಖೆಯು ಚರ್ಚ್ಗೆ ಭೋಗ್ಯಕ್ಕೆ ನೀಡಿತ್ತು. ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಷ್ಟೇ ಇದನ್ನು ಬಳಸಬೇಕು ಎಂದು ಷರತ್ತು ಹಾಕಲಾಗಿತ್ತು. ಇದರ ಹೊರತಾಗಿ ಚರ್ಚ್ಗೆ ಜಾಗದ ಮೇಲೆ ಬೇರೆ ಯಾವ ಹಕ್ಕೂ ಇಲ್ಲ ಎಂಬುದು ತನಿಖೆಯಿಂದ ಗೊತ್ತಾಯಿತು. ಹೀಗಾಗಿ ಈ ಜಾಗದ ಹಸ್ತಾಂತರಕ್ಕೆ ಪ್ರತಿಯಾಗಿ ನೀಡಿದ್ದ ಪರಿಹಾರದ ಹಣ ಮತ್ತು ಅದಕ್ಕೆ ಸಂದಾಯವಾಗಿದ್ದ ಬಡ್ಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.