ADVERTISEMENT

ಪ್ರವರ್ಗ 2 ಎ ಅಡಿ ಬಣಜಿಗರು ಪಡೆದ ಪ್ರಮಾಣ ಪತ್ರ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 18:59 IST
Last Updated 26 ಏಪ್ರಿಲ್ 2022, 18:59 IST

ಬೆಂಗಳೂರು: ಲಿಂಗಾಯಿತ ಬಲಜಿಗ/ ಬಣಜಿಗ ಸಮುದಾಯದವರು ಪ್ರವರ್ಗ 2 ಎ ಅಡಿ ಪಡೆದಿರುವ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಮನವಿ ಸಲ್ಲಿಸಿದ್ದಾರೆ.

ಬಣಜಿಗ ಜಾತಿಯವರು ಪ್ರವರ್ಗ– 2ಎ ಅಡಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣಪತ್ರ ಪಡೆದರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇಂತಹ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ಪ್ರವರ್ಗ– 2 ಎ ಅಡಿ ಶೇ 15ರಷ್ಟು ಮೀಸಲಾತಿ ಇದೆ. ಅಗಸ, ತಿಗಳ, ಸವಿತಾ, ದೇವಾಂಗ, ಈಡಿಗ, ಕುರುಬ ಸೇರಿದಂತೆ 102 ಜಾತಿಗಳು ಈ ಪ್ರವರ್ಗದಡಿ ಮೀಸಲಾತಿ ಪಡೆಯುತ್ತಿವೆ. ಆದರೆ ಪ್ರವರ್ಗ–3 ಎ ಅಡಿಯಲ್ಲಿರುವ ಬಲಜಿಗ/ಬಣಜಿಗ ಸಮುದಾಯದವರನ್ನು ಶಿಕ್ಷಣದ ಮೀಸಲಾತಿಗೆ ಸೀಮಿತವಾಗಿ ಪ್ರವರ್ಗ–2ಎಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಪರಿಣಾಮವಾಗಿ ಬಣಜಿಗರು ಎಂಜಿನಿಯರಿಂಗ್ ಹಾಗೂ ವೈದ್ಯ ಶಿಕ್ಷಣದ ಎಲ್ಲ ಕೋರ್ಸ್‌ಗಳಲ್ಲಿ ಪ್ರವರ್ಗ–2 ಎ ಅಡಿ ಪ್ರವೇಶ ಪಡೆಯುತ್ತಿದ್ದಾರೆ.ಹೀಗೆ ಪ್ರಮಾಣ ಪತ್ರ ನೀಡದಂತೆ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.