ಬೆಂಗಳೂರು: ರಾಜ್ಯದಲ್ಲಿರುವ ವಹ್ನಿಕುಲ ಕ್ಷತ್ರಿಯ ಹಾಗೂ ಅಗ್ನಿಕುಲ ಕ್ಷತ್ರಿಯ ಸಮುದಾಯಗಳಿಗೆ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿಗಳನ್ನು ಸ್ಥಾಪಿಸಬೇಕು ಎಂದು ದಕ್ಷಿಣ ಭಾರತ ಅಗ್ನಿಕುಲ–ವಹ್ನಿಕುಲ ಪ್ರಾಚೀನ ಪರಸತ್ವ ಪರಿಶೋಧನಾ ಸಂಸ್ಥೆ ಆಗ್ರಹಿಸಿದೆ.
ಈ ಕುರಿತುಸಂಸ್ಥೆಯ ವಕ್ತಾರ ವರ್ತೂರು ಜೆ.ಕೆ.ಗಿರೀಶ್ ಅವರು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
‘ಬೆಂಗಳೂರು ಕರಗ ಮಹೋತ್ಸವದ ಆರಾಧಕರು ಹಾಗೂ ಧರ್ಮರಾಯನ ಕುಲಕ್ಕೆ ಸೇರಿದ ವಹ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳಾದ ವನ್ನಿರೆಡ್ಡಿ, ವನ್ನೆಕಾಪು, ಪಳ್ಳಿರೆಡ್ಡಿ, ಪಳ್ಳಿಕಾಪು, ಧರ್ಮರಾಜಕಾಪು, ವನ್ನಿಯರ್ ಗೌಂಡರ್, ವಹ್ನಿಕುಲ ಗೌಡ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು’ ಎಂದು ಗಿರೀಶ್ ಒತ್ತಾಯಿಸಿದರು.
‘ಈಗಾಗಲೇ ನೆರೆಯ ತೆಲಂಗಾಣ ರಾಜ್ಯದಲ್ಲಿ ನಮ್ಮ ಜನಾಂಗಕ್ಕೆ ಪ್ರತ್ಯೇಕ ನಿಗಮ ರಚಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂವಹ್ನಿಕುಲ ಕ್ಷತ್ರಿಯ ಹಾಗೂ ಅಗ್ನಿಕುಲ ಕ್ಷತ್ರಿಯರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ನಮ್ಮ ಸಮುದಾಯ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ನಮ್ಮವರ ಕುಲಕಸುಬುಗಳಾದ ವ್ಯವಸಾಯ, ತೋಟಗಾರಿಕೆ, ಒಕ್ಕಲುತನ. ಈ ಜನಾಂಗದವರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆಯ ಅಗತ್ಯವಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನಮ್ಮ ಜನಾಂಗಕ್ಕೆ ಸಂಬಂಧಪಡದ ಕೆಲವು ಜಾತಿಗಳಿದ್ದು, ಅವುಗಳನ್ನು ತೆಗೆಯಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.