ಯಲಹಂಕ: ಅಳ್ಳಾಳಸಂದ್ರದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್ನಲ್ಲಿ ‘ತಬ್ಲಿಘಿ’ಗಳನ್ನು ತಂದಿಟ್ಟಿರುವುದನ್ನು ವಿರೋಧಿಸಿ, ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಶುಕ್ರವಾರ ರೆಸಾರ್ಟ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
‘ಯಲಹಂಕದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ಗೆ ಜನ ಸಹಕಾರ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಈ ಪ್ರದೇಶದಲ್ಲಿ ಆಗಿಲ್ಲ. ಈ ಸಂದರ್ಭದಲ್ಲಿ, ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಕ್ವಾರಂಟೈನ್ನಲ್ಲಿದ್ದ 35 ವ್ಯಕ್ತಿಗಳನ್ನು ಇಲ್ಲಿ ತಂದು ಇರಿಸಿರುವುದು ಸರಿಯಲ್ಲ’ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
‘ತಬ್ಲಿಘಿಗಳನ್ನು ಇಲ್ಲಿ ತಂದಿಸಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಸ್ಥಳಾಂತರಿಸಬೇಕು’ ಎಂದು ಅವರು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಇವರನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಅವರು ಮನವಿ ಮಾಡಿದರು.
ಪೊಲೀಸರ ನೇತೃತ್ವದಲ್ಲಿ ‘ತಬ್ಲಿಘಿ’ಗಳನ್ನು ಮೂರು ಮಿನಿ ಬಸ್ಗಳಲ್ಲಿ ಕರೆದೊಯ್ಯಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.